ಉಜಿರೆ: ಪರಿಶುದ್ಧ ಮನಸ್ಸಿನಿಂದ ದೇವರ ಭಕ್ತಿ, ಧ್ಯಾನ ಮಾಡಿ, ಧರ್ಮದ ಅನುಷ್ಠಾನದೊಂದಿಗೆ ಪರಸ್ಪರ ಪ್ರೀತಿ-ವಿಶ್ವಾಸದಿಂದ ಜೀವನ ನಡೆಸಿದಾಗ ಎಲ್ಲರಿಗೂ ಆರೋಗ್ಯ ಹಾಗೂ ನೆಮ್ಮದಿ ಸಿಗುತ್ತದೆ ಎಂದು ಧರ್ಮಸ್ಥಳ ಕನ್ಯಾಡಿಯ ರಾಮಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಧರ್ಮಸ್ಥಳದ ಕನ್ಯಾಡಿಯಲ್ಲಿರುವ ರಾಮಕ್ಷೇತ್ರದ ಗುರುದೇವ ಮಠದಲ್ಲಿ ಬುಧವಾರ ಅವರು ರಾಮ ಮತ್ತು ಪರಿವಾರ ಮೂರ್ತಿಗಳು ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿ ಪ್ರತಿಷ್ಠಾಪನೆ ಮಾಡಿ ಆಶೀರ್ವಚನ ನೀಡಿದರು.
‘ಶ್ರೀರಾಮನ ಮನಸ್ಸಿನಂತೆ ಎಲ್ಲರ ಮನದಲ್ಲಿಯೂ ಪಾವಿತ್ರ್ಯ ಇರುತ್ತದೆ. ನಾವು ಅದರ ಸದುಪಯೋಗ ಮಾಡಿ ಪ್ರೀತಿ-ವಿಶ್ವಾಸದಿಂದ ಸಾರ್ಥಕ ಜೀವನ ನಡೆಸಬೇಕು’ ಎಂದು ಅವರು ಸಲಹೆ ನೀಡಿದರು.
ಮಂಗಳೂರಿನ ಚಿತ್ತರಂಜನ್ ಗರೋಡಿ, ಶೈಲೇಶ್ ಕುಮಾರ್, ಭಾಸ್ಕರ ಧರ್ಮಸ್ಥಳ ಹಾಗೂ ಉಜಿರೆಯ ಡಾ. ಎಂ. ಎಂ. ದಯಾಕರ್ ಇದ್ದರು.