ಮಂಗಳೂರು: ಕಾಸರಗೋಡು ಗಡಿನಾಡ ಸಾಹಿತ್ಯ-ಸಾಂಸ್ಕೃತಿಕ ಅಕಾಡೆಮಿ, ಮಂಗಳೂರು ಕಲ್ಕೂರ ಪ್ರತಿಷ್ಠಾನ ಹಾಗೂಕವಿ ಕಯ್ಯಾರ ಕುಟುಂಬದ ಆಶ್ರಯದಲ್ಲಿ ಕವಿ ದಿವಂಗತ ಕೈಯಾರ ಕಿಂಞಣ್ಣ ರೈ ಅವರ 106ನೇ ಜನ್ಮದಿನವನ್ನು ಕುಟುಂಬದ ‘ಕವಿತಾ ಕುಟೀರ’ದಲ್ಲಿ ಆಚರಿಸಲಾಯಿತು.
ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ ಅವರು ಗೂಗಲ್ ಮೀಟ್ನಲ್ಲಿ ಭಾಗವಹಿಸಿ ಕನ್ನಡದ ಕಲಿ ಕಯ್ಯಾರ ಕಿಂಞಣ್ಣ ರೈ ಅವರು ಸಾಹಿತ್ಯ, ಸಾಂಸ್ಕೃತಿಕ, ರಾಜಕೀಯ, ಮಾತ್ರವಲ್ಲದೆ ಭೂಮಿಯ ಒಡಲಲ್ಲೂ ನಲ್ಮೆಯ ಬೀಜ ಬಿತ್ತಿ ಪರಿಶ್ರಮದಿಂದಲೇ ಪ್ರತಿಫಲದ ಬೆಳಕ ಕಂಡವರು. ರೈತನಾಗಿ, ಸಾಹಿತಿಯಾಗಿ, ಪಂಚಾಯತ್ ಅಧ್ಯಕ್ಷರಾಗಿ, ಭಾಷೆಯ ಮೇಲಿನ ಅತೀವ ಪ್ರೀತಿ ಹಾಗೂ ಭಕ್ತಿಯಿಂದ ಭಾಷೆಯ ಉಳಿವಿಗಾಗಿ ಹೋರಾಡಿದ ಧೀಮಂತ ಹೋರಾಟಗಾರ ಆಗಿದ್ದರು’ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಕಯ್ಯಾರರ ಜನ್ಮದಿನಾಚರಣೆ, ಅವರ ದಾಖಲಾತಿಗಳನ್ನು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ, ಅವರ ಪತ್ರಕರ್ತನ ಕೆಲಸ ಹೆಮ್ಮೆ ತರುವಂತದ್ದು’ ಎಂದು ಹೇಳಿದರು.
ಕರ್ನಾಟಕ ಜಾನಪದ ಪರಿಷತ್ ಗಡಿನಾಡ ಘಟಕದ ಅಧ್ಯಕ್ಷ ಎ. ಆರ್. ಸುಬ್ಬಯ್ಯ ಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಧ್ಯಾಪಕ ಶ್ರೀನಾಥ್ ಕೈಯಾರ ಜೀವನಗಾಥೆಯನ್ನು ನೆನಪಿಸಿದರು. ಪ್ರಮುಖರಾದ ಮಾಹಿನ್ ಕೇಳೋಟ್, ಕುಂಬ್ಡಾಜೆ ಗ್ರಾಮ ಪಂಚಾಯಿತಿ ಸದಸ್ಯ ಹರೀಶ್ ಗೋಸಡ, ಅಕಾಡೆಮಿಯ ಕಾರ್ಯದರ್ಶಿ ಅಖಿಲೇಶ್ ನಗುಮುಗ, ಯಕ್ಷಗುರು ಜಯರಾಮ್ ಪಾಟಾಳಿ ಪಡುಮಲೆ, ಮಮ್ಮುಞ ಪಚ್ಚಂಬಲ ಮಾತನಾಡಿದರು. ವಸಂತ ಬಾರಡ್ಕ , ಜೋತ್ಸ್ನಾ ಕಡಂದೇಲು, ಚಿತ್ತರಂಜನ್ , ಪ್ರದೀಪ್ ಕಡಂಬಾರ್ ಕಯ್ಯಾರರ ಆಯ್ದ ಕವನಗಳನ್ನು ಹಾಡಿದರು.