ಮಂಗಳೂರು: ಕಾಶೀಮಠಾಧೀಶ ಸಂಯಮೀಂದ್ರ ತೀರ್ಥರ ಚಾತುರ್ಮಾಸ್ಯ ವ್ರತ ಇಲ್ಲಿನ ಕೊಂಚಾಡಿ ಕ್ಷೇತ್ರದ ಕಾಶೀಮಠದ ಶಾಖಾಮಠದಲ್ಲಿ ಶುಕ್ರವಾರ (ಇದೇ 10) ಮೃತಿಕಾ ಪೂಜನೆಯೊಂದಿಗೆ ಪ್ರಾರಂಭವಾಗಲಿದೆ.
ಸಂಸ್ಥಾನದ ದೇವರುಗಳಿಗೆ ಪಂಚಾಮೃತ, ಗಂಗಾಭಿಷೇಕ, ಲಘು ವಿಷ್ಣು ಅಭಿಷೇಕ, ಶತಕಲಶಾಭಿಷೇಕ, ಬಳಿಕ ಪವಮಾನ ಅಭಿಷೇಕಗಳು ಶ್ರೀಗಳಿಂದ ನೆರವೇರಲಿವೆ. ನಂತರ ತಪ್ತ ಮುದ್ರಾಧಾರಣೆ ನಡೆಯಲಿದೆ. ಸಂಜೆ ಮೃತಿಕಾ ಪೂಜನೆ ಬಳಿಕ ಸಭಾ ಕಾರ್ಯಕ್ರಮ ಜರುಗಲಿದೆ.
ಸಮಾಜದವರು ಭಾಗವಹಿಸಲು ಅವಕಾಶ ಇರುವುದಿಲ್ಲ. ಸಂಸ್ಥಾನದಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ಸೇವೆ ಸಲ್ಲಿಸಲು ಇಚ್ಛಿಸುವ ಭಜಕರು ಈ ದೂರವಾಣಿ ಸಂಖ್ಯೆಗಳಿಗೆ 9449362909, 9448845909 ಸಂಪರ್ಕಿಸಲು ಪ್ರಕಟಣೆ ಕೋರಿದೆ.
ಈ ಬಾರಿ ಕೋವಿಡ್-19 ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಭಕ್ತಾದಿಗಳಿಂದ ಸುರಕ್ಷಿತ ಅಂತರವನ್ನು ಕಾಪಾಡುವುದು ಕಷ್ಟವಾಗಲಿದ್ದು, ಭಕ್ತಾದಿಗಳಿಗೆ ಕ್ಷೇತ್ರದ ಭೇಟಿ ನಿರ್ಬಂಧಿಸಲಾಗಿದೆ. ಸರ್ಕಾರದ ಮಾರ್ಗಸೂಚಿಯಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಭಕ್ತಾದಿಗಳು ಸಹಕರಿಸಬೇಕು ಎಂದು ಚಾತುರ್ಮಾಸ್ಯ ಸಮಿತಿಯ ಡಿ.ವಾಸುದೇವ್ ಕಾಮತ್ ಮತ್ತು ಕಸ್ತೂರಿ ಸದಾಶಿವ ಪೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.