ಉಳ್ಳಾಲ: ‘ಪಬ್ಜಿ’ ಮಾದರಿಯ ಆಟದ ಸಂಘರ್ಷದಲ್ಲಿ ಕೆ.ಸಿ.ರೋಡನ್ನ ಆಕೀಫ್ (12)ನನ್ನು ಕೊಲೆ ಮಾಡಿರುವ ಕುರಿತು ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕನು ತನ್ನ ತಂದೆಗೆ ತಿಳಿಸಿದ್ದರೂ, ಆತ ಬಚ್ಚಿಟ್ಟಿರುವುದನ್ನು ಪೊಲೀಸರು ಭೇದಿಸಿದ್ದಾರೆ.
ಈ ಆರೋಪದಲ್ಲಿ ತಂದೆ, ಕೆ.ಸಿ.ರೋಡ್ ಪಿಲಿಕೂರು ನಿವಾಸಿ ಸಂತೋಷ್ (45)ನನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಎನ್ನಲಾಗಿದೆ. ಬಾಲಕನನ್ನು ಪೊಲೀಸರು ಬಾಲಕರ ಬಾಲಮಂದಿರ (ರಿಮ್ಯಾಂಡ್ ಹೋಂ)ಗೆ ಕಳುಹಿಸಿದ್ದಾರೆ.
ಆಕೀಫ್ನ ಹತ್ಯೆ ನಡೆಸಿ ಮನೆಗೆ ಬಂದಿದ್ದ ಬಾಲಕನು, ತನ್ನ ತಂದೆಯಲ್ಲಿ ವಿಚಾರವನ್ನು ತಿಳಿಸಿದ್ದನು. ಆದರೆ, ಈ ಘಟನೆ ಕುರಿತು ಯಾರಿಗೂ ತಿಳಿಸದಂತೆ ತಂದೆ ಸಂತೋಷ್ ಹೇಳಿದ್ದು, ಮನೆಯಲ್ಲಿಯೇ ರಕ್ಷಣೆ ನೀಡಿದ್ದಾನೆ. ಸಂತೋಷ್, 30 ವರ್ಷಗಳಿಂದ ತಲಪಾಡಿಯಲ್ಲೇ ಇದ್ದು, ಲಾರಿ ಚಾಲಕನಾಗಿದ್ದಾನೆ.
ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಉಡುಪಿ ದೊಡ್ಡಣಗುಡ್ಡೆಯ ಬಾಲ ನ್ಯಾಯಮಂಡಳಿ ಮುಂದೆ ಸೋಮವಾರ ಹಾಜರುಪಡಿಸಲಾಗಿದೆ. ಬಳಿಕ ಬಾಲಕರ ಬಾಲಮಂದಿರಕ್ಕೆ ಕಳುಹಿಸಲಾಗಿದೆ.
ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನ ಮನೆಯವರಿಗೆ ಸ್ಥಳೀಯರು ಬೆದರಿಕೆ ಹಾಕುತ್ತಿದ್ದು, ಭದ್ರತೆ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮನೆಯಲ್ಲಿ ಬಾಲಕನ ತಾಯಿ ಮತ್ತು ಸಹೋದರ ಮಾತ್ರ ಇದ್ದಾರೆ.