ಸುರತ್ಕಲ್: ಹಡಿಲು ಗದ್ದೆಯಲ್ಲಿ ಕೃಷಿಗೆ ಉತ್ತೇಜನ ನೀಡುತ್ತಿರುವ ಶಾಸಕ ಡಾ. ಭರತ್ ಶೆಟ್ಟಿ ವೈ, ಬುಧವಾರ ಸುರತ್ಕಲ್ ರಥಬೀದಿಯಲ್ಲಿರುವ ಬಾಕಿಮಾರು ಗದ್ದೆಯಲ್ಲಿ ನೇಜಿ ನೆಟ್ಟು ಸಂಭ್ರಮಿಸಿದರು.
‘ನಮ್ಮ ಮಣ್ಣಿನ ಸಂಪ್ರದಾಯವನ್ನು ಉಳಿಸುವ ಕೆಲಸವನ್ನು ಸ್ಥಳೀಯರು ಮತ್ತು ಈ ಪ್ರದೇಶದ ದೇವಳಗಳ ಭಕ್ತರು ಮಾಡುತ್ತಿದ್ದಾರೆ. ಗದ್ದೆಯನ್ನು ಉಳಿಸಿಕೊಂಡು ಮುಂದೆಯೂ ನಿರಂತರವಾಗಿ ಈ ಕಾಯಕ ಮಾಡಬೇಕು. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಡಿಲು ಭೂಮಿಯನ್ನು ಗುರುತಿಸಿ ಭತ್ತ ನಾಟಿಗೆ ಕ್ರಮಕೈಗೊಂಡಿದ್ದು, ಕೃಷಿ ಕಾರ್ಯ ಪ್ರಗತಿಯಲ್ಲಿದೆ’ ಎಂದರು.
ನವದುರ್ಗಾ ಫ್ರೆಂಡ್ಸ್ ಸರ್ಕಲ್, ತ್ರೈರೂಪಿಣಿ ಮಹಿಳಾ ಮಂಡಳಿ ಸದಸ್ಯರು ನಾಟಿ ಕಾಯಕದಲ್ಲಿ ಕೈಜೋಡಿಸಿದರು. ಪುರಾತನ ಮಾರಿಯಮ್ಮ, ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಸಮಿತಿ ಪದಾಧಿಕಾರಿಗಳು, ಉತ್ತರ ಮಂಡಲ ಬಿಜೆಪಿ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ ಇದ್ದರು.