ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಕೆರೆಗಳ ಅಭಿವೃದ್ಧಿಗೆ ಕೈಜೋಡಿಸಿದ ‘ಮುಡಾ’

2018ರಿಂದ ಈ ವರೆಗೆ ಒಟ್ಟು ₹6.18 ಕೋಟಿ ವೆಚ್ಚ, ರಕ್ಷಣಾ ಗೋಡೆ ನಿರ್ಮಾಣಕ್ಕೆ ಆದ್ಯತೆ
Last Updated 29 ಜುಲೈ 2021, 4:18 IST
ಅಕ್ಷರ ಗಾತ್ರ

ಮಂಗಳೂರು: ನಗರ ಹಾಗೂ ಸುತ್ತಲಿರುವ ಹತ್ತಾರು ಕೆರೆಗಳ ಅಭಿವೃದ್ಧಿ ಮಾಡುವ ಮೂಲಕ ನಗರದ ಸೌಂದರ್ಯೀಕರಣ ಹಾಗೂ ನೀರಿನ ಸಮಸ್ಯೆ ಪರಿಹಾರಕ್ಕೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಮುಂದಡಿ ಇಟ್ಟಿದೆ.

ಪ್ರತಿ ವಿಧಾನಸಭಾ ಕ್ಷೇತ್ರವಾರು ಕೆರೆಗಳ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಪ್ರಮುಖವಾಗಿ ಕೆರೆಗಳಿಗೆ ಚರಂಡಿ ನೀರು ಸೇರುವುದನ್ನು ತಡೆಯುವುದು, ರಕ್ಷಣಾ ಗೋಡೆ ನಿರ್ಮಾಣ ಮಾಡುವುದಕ್ಕೆ ಒತ್ತು ನೀಡಲಾಗುತ್ತಿದೆ. ಕೆರೆಗಳ ಅಭಿವೃದ್ಧಿಯ ಮೂಲಕ ನಗರದ ಅಂತರ್ಜಲ ಮಟ್ಟ ವೃದ್ಧಿ ಆಗಲಿದ್ದು, ಬಾವಿಗಳಲ್ಲೂ ನೀರಿನ ಮಟ್ಟ ಹೆಚ್ಚಾಗಲಿದೆ ಎಂದು ಮುಡಾ ಅಧಿಕಾರಿಗಳು ತಿಳಿಸಿದ್ದಾರೆ.

ಭೂ ಪರಿವರ್ತನೆ ಅರ್ಜಿದಾರರಿಂದ ಸಂಗ್ರಹಿಸುವ ಕೆರೆ ಅಭಿವೃದ್ಧಿ ಶುಲ್ಕದಿಂದ ಹಲವು ಕೆರೆಗಳನ್ನು ಅಭಿವೃದ್ಧಿ ಪಡಿಸಲು ಮುಡಾದಿಂದ ಯೋಜನೆ ರೂಪಿಸಲಾಗಿತ್ತು. ಆರಂಭದಲ್ಲಿ ನಿಧಾನಗತಿಯಲ್ಲಿ ಸಾಗಿದ್ದ ಕೆರೆ ಅಭಿವೃದ್ಧಿ, ಇದೀಗ ಚುರುಕಾಗಿದೆ. 2017–18ರಲ್ಲಿ ₹4,94,44,520 ಶುಲ್ಕ ಸಂಗ್ರಹವಾಗಿದ್ದರೂ, ಕೇವಲ ₹ 3,05,101 ಖರ್ಚು ಮಾಡಲಾಗಿತ್ತು. ಆದರೆ, ಈ ವರ್ಷ ಶುಲ್ಕ ಸಂಗ್ರಹಕ್ಕಿಂತ ಹೆಚ್ಚಿನ ಖರ್ಚು ಮಾಡಲಾಗಿದೆ.

ಕ್ಷೇತ್ರವಾರು ಕೆರೆ ಅಭಿವೃದ್ಧಿ: ಮಂಗಳೂರು ದಕ್ಷಿಣ ಕ್ಷೇತ್ರದ ಜೆಪ್ಪಿನಮೊಗರು ಕಂರ್ಬಿಸ್ಥಾನ ದೇವಸ್ಥಾನದ ಬಳಿಯ ಕೆರೆ, ಬಜಾಲು ಕುಂದೋಡಿಯ ಕೆರೆ, ಕುದ್ರೋಳಿ ನಡುಪಳ್ಳಿ ಜುಮ್ಮಾ ಮಸೀದಿ ವಠಾರದ ಕೆರೆ ಅಭಿವೃದ್ದಿಗೆ ತಲಾ ₹25 ಲಕ್ಷ ವೆಚ್ಚದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿದೆ.

ನಗರದ ಹೊರವಲಯದ ಬೈರಾಡಿ ಕೆರೆಯ ಮುಂದುವರಿದ ಅಭಿವೃದ್ಧಿ ಕಾಮಗಾರಿಗೆ ₹98 ಲಕ್ಷ ಮೊತ್ತದ ಟೆಂಡರ್‌ ಕರೆದು, ಭಾಗಶಃ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಈ ಕೆರೆಯ ಉದ್ಯಾನ ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳಿಗಾಗಿ ಪ್ರವಾಸೋದ್ಯಮ ಇಲಾಖೆಯಿಂದ ₹25 ಲಕ್ಷ ಮಂಜೂರಾಗಿದೆ ಎಂದು ಮುಡಾ ಅಧ್ಯಕ್ಷ ರವಿಶಂಕರ್‌ ಮಿಜಾರು ತಿಳಿಸಿದ್ದಾರೆ.

ನಗರದ ಕದ್ರಿ ಕೈಬಟ್ಟಲು ಕೆರೆ ಅಭಿವೃದ್ಧಿಗೆ ₹1 ಕೋಟಿ, ಜೋಗಿಮಠ ಕೆರೆ ಅಭಿವೃದ್ಧಿಗೆ ₹50 ಲಕ್ಷ ಅಂದಾಜಿಸಲಾಗಿದ್ದು, ಕಾಮಗಾರಿ ಆರಂಭಿಸಲಾಗಿದೆ. ಕದ್ರಿ 32ಕಂಬಳದ ಗುತ್ತು ಸರ್ವಿಸ್ ಸ್ಟೇಷನ್ ಬಳಿಯ ಕೆರೆ ಅಭಿವೃದ್ಧಿಗೆ ₹55 ಲಕ್ಷ, ಬೋಳಾರ ಮಹಾಕಾಳಿ ಪಡ್ಪು ಮೊಯ್ಲಿಕೆರೆ(ಶೆಟ್ಟಿ ಬೆಟ್ಟು) ಅಭಿವೃದ್ಧಿಗೆ ₹50 ಲಕ್ಷ ಹಾಗೂ ಮಹಾಮಾಯಿ ಕೆರೆ ಅಭಿವೃದ್ಧಿಗೆ ₹45.50 ಲಕ್ಷ ಅಂದಾಜುಪಟ್ಟಿ ತಯಾರಿಸಲಾಗಿದೆ.

ಇನ್ನು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಟಿಪಳ್ಳದ ಕೆರೆ ಅಭಿವೃದ್ಧಿಯನ್ನು ₹98 ಲಕ್ಷ ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ. ನೀರುಮಾರ್ಗದ ಬೊಂಡಂತಿಲದ ಕಾಪೆಟ್ಟು ಕೆರೆಯನ್ನು ₹21.50 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದ್ದು, ಮುಕ್ತಾಯದ ಹಂತದಲ್ಲಿದೆ. ಪಕ್ಕಲಪಾದೆ ಕೆರೆ ಅಭಿವೃದ್ಧಿಗೆ ₹25 ಲಕ್ಷ ಮೊತ್ತಕ್ಕೆ ಟೆಂಡರು ಕರೆಯಲಾಗಿದೆ. ಕುಲಶೇಖರ ಕೆರೆಯನ್ನು ₹50 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ಟೆಂಡರ್‌ ಕರೆಯಲಾಗಿದೆ.

ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ಬೆಳ್ಳಾಯೂರು ಜಳಕದ ಕೆರೆ ಕಾಮಗಾರಿಯನ್ನು ₹1.50 ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ. ಪಡುಪಣಂಬೂರು ಕೆರೆಗೆ ₹25 ಲಕ್ಷ ವೆಚ್ಚ ಅಂದಾಜಿಸಲಾಗಿದೆ. ಬಪ್ಪನಾಡು ಗ್ರಾಮದ ಆನೆ ಕೆರೆ ಅಭಿವೃದ್ಧಿಗೆ ₹3 ಕೋಟಿ ವೆಚ್ಚದ ಅಂದಾಜುಪಟ್ಟಿ ತಯಾರಿಸಲಾಗಿದೆ.

ಮಂಗಳೂರು ವಿಧಾನಸಭಾ ಕ್ಷೇತ್ರದ ದಡಸ್ ಕೆರೆಗೆ ₹99 ಲಕ್ಷ ವೆಚ್ಚದಲ್ಲಿ ಹೊಸ ರೂಪನೀಡಲಾಗಿದೆ. ಸೋಮೇಶ್ವರ ಸೋಮನಾಥೇಶ್ವರ ದೇವಸ್ಥಾನದ ಗಧಾ ತೀರ್ಥ ಕೆರೆ ಅಭಿವೃದ್ಧಿಗೆ ₹1 ಕೋಟಿ ಮೊತ್ತದ ಟೆಂಡರ್‌ ಕರೆಯಲಾಗಿದೆ. ಅಂಬ್ಲಮೊಗರು ಗ್ರಾಮದ ಕೆರೆ ಅಭಿವೃದ್ಧಿಯನ್ನು₹21 ಲಕ್ಷ ವೆಚ್ಚದಲ್ಲಿಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT