ಮೂಲ್ಕಿ: ಮಂಗಳೂರು ಕಮಿಷನರೇಟ್ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳು ವಶಪಡಿಸಿಕೊಂಡ ₹ 69.17 ಲಕ್ಷ ಮೌಲ್ಯದ ಗಾಂಜಾ ಹಾಗೂ ಇತರ ಮಾದಕ ವಸ್ತುಗಳನ್ನು ಕಾರ್ನಾಡು ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರಲ್ಲಿ ಶುಕ್ರವಾರ ನಾಶಪಡಿಸಲಾಯಿತು.
ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ನೇತೃತ್ವದಲ್ಲಿ ಮಾದಕ ಪದಾರ್ಥ ನಿಷೇಧ ದಿನಾಚರಣೆ ಅಂಗವಾಗಿ ಕಾರ್ಯಾಚರಣೆ ನಡೆಯಿತು. ಜಿಲ್ಲೆಯ ಐದು ಠಾಣೆಗಳಿಂದ 8 ಪ್ರಕರಣದಲ್ಲಿ ವಶಪಡಿಸಿಕೊಂಡ ₹ 4.17 ಲಕ್ಷ ರೂ ಮೌಲ್ಯದ ಗಾಂಜಾ ಹಾಗೂ 43 ಗ್ರಾಂ ಎಂಡಿಎಂಎ ನಾಶಪಡಿಸಿದ ವಸ್ತುಗಳಲ್ಲಿ ಇತ್ತು.
ಕಮಿಷನರೇಟ್ ವ್ಯಾಪ್ತಿಯ ಠಾಣೆಗಳಲ್ಲಿ ದಾಖಲಾದ 34 ಪ್ರಕರಣಗಳ ₹ 65 ಲಕ್ಷ ಮೌಲ್ಯದ ಗಾಂಜಾ ಹಾಗೂ 200 ಗ್ರಾಂ ಎಂಡಿಎಂಎ ಕೂಡ ನಾಶವಾಯಿತು.
ಅಧಿಕಾರಿಗಳಾದ ದಿನೇಶ್ ಕುಮಾರ್, ರವೀಶ್ ನಾಯಕ್, ಮನೋಜ್ ಕುಮಾರ್, ರಿಷ್ಯಂತ್ ಕುಮಾರ್, ರಾಜೇಂದ್ರ ಹಾಗೂ ಮೂಲ್ಕಿ ಠಾಣೆಯ ವಿದ್ಯಾಧರ್, ಕಾರ್ನಾಡಿನ ಬಯೊ ಸಂಸ್ಥೆ ಸಸ್ಟೇನಬಿಲಿಟಿ ಹೆಲ್ತ್ ಕೇರ್ ಸೊಲ್ಯೂಷನ್ಸ್ ಪ್ರಬಂಧಕ ಪ್ರಶಾಂತ್ ಇದ್ದರು.