ಮಂಗಳೂರು: ಕಸಾ ಬೆಂಗರೆಯಲ್ಲಿ ಪೊಲೀಸರ ಮೇಲೆ ಕಾರು ಚಲಾಯಿಸಿ ಕೊಲೆಗೆ ಯತ್ನಿಸಿದ್ದ ಆರೋಪದಡಿ ದಾಖಲಾಗಿದ್ದ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕಸಬ ಬೆಂಗರೆ ನಿವಾಸಿ ಮೊಯಿದ್ದೀನ್ ಆದಿಲ್ (22) ಎಂಬಾತನನ್ನು ಪಣಂಬೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
2017ರ ಜುಲೈ ತಿಂಗಳಿನಲ್ಲಿ ಕಸಬಾ ಬೆಂಗರೆಯಲ್ಲಿ ಆದಿಲ್ ಪೊಲೀಸರ ಮೇಲೆ ಕಾರು ಚಲಾಯಿಸಿ ಕೊಲೆ ಮಾಡಲು ಯತ್ನಿಸಿದ್ದ. ನ್ಯಾಯಾಲಯ ಈತನ ಬಂಧನಕ್ಕೆ ವಾರೆಂಟ್ ಹೊರಡಿಸಿತ್ತು. ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ. ಬುಧವಾರ ಕಸಬಾ ಬೆಂಗರೆಯಲ್ಲಿ ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮಂಗಳೂರು ಉತ್ತರ ವಿಭಾಗದ ಸಹಾಯಕ ಎಸಿಪಿ ಶ್ರೀನಿವಾಸ ಗೌಡ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಣಂಬೂರು ಠಾಣೆ ಇನ್ಸ್ಪೆಕ್ಟರ್ ಅಜ್ಮತ್ ಆಲಿ, ಸಬ್ ಇನ್ಸ್ಪೆಕ್ಟರ್ ಉಮೇಶ್ ಕುಮಾರ್ ಎಂ.ಎನ್., ಕಾನ್ಸ್ಟೆಬಲ್ಗಳಾದ ಶೈಲೇಂದ್ರ ಕೆ. ಮತ್ತು ಭರತ್ ಪಾಲ್ಗೊಂಡಿದ್ದರು.