ಮಂಗಳೂರು: ಪದೇ ಪದೇ ಪೇಯಿಂಗ್ ಗೆಸ್ಟ್ಗೆ (ಪಿಜಿ) ನುಗ್ಗಿ ಅಸಭ್ಯವಾಗಿ ವರ್ತಿಸಿ, ಯುವತಿಯರ ಉಡುಪುಗಳನ್ನು ಕದ್ದು ಕಿರುಕುಳ ನೀಡುತ್ತಿದ್ದ ವಿಕೃತ ಮನಸ್ಸಿನ ಯುವಕನೊಬ್ಬನನ್ನು ಮಂಗಳವಾರ ರಾತ್ರಿ ಹಿಡಿದ ನಗರದ ಶರವು ಮಹಾಗಣಪತಿ ದೇವಸ್ಥಾನದ ಸಮೀಪದ ಪಿಜಿಯೊಂದರ ಯುವತಿಯರು, ಆತನಿಗೆ ಥಳಿಸಿದ್ದಾರೆ.
ನಗರದಲ್ಲಿ ನೆಲೆಸಿರುವ ಕೇರಳದ ಯುವಕ ಆಗಾಗ ರಾತ್ರಿ ಹೊತ್ತು ಪಿ.ಜಿ ಕಟ್ಟಡ ಪ್ರವೇಶಿಸುತ್ತಿದ್ದ. ಯುವತಿಯರ ಕೊಠಡಿಗಳಿಗೆ ಹೋಗಿ ಅನುಚಿತವಾಗಿ ವರ್ತಿಸಿ ಪರಾರಿಯಾಗುತ್ತಿದ್ದ. ಯುವತಿಯರ ಉಡುಪುಗಳನ್ನು ಕದ್ದೊಯ್ಯುತ್ತಿದ್ದ. ಮಂಗಳವಾರ ರಾತ್ರಿಯೂ ಕಟ್ಟಡದೊಳಕ್ಕೆ ನುಗ್ಗಿದ್ದ ಆತ, ಯುವತಿಯರ ಉಡುಪುಗಳನ್ನು ಹೊತ್ತೊಯ್ದು ತಾರಸಿ ಮೇಲೆ ಇರಿಸಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಯುವಕ ಕಟ್ಟಡದೊಳಕ್ಕೆ ನುಗ್ಗಿರುವುದನ್ನು ತಿಳಿದ ಸುಮಾರು 40 ಮಂದಿ ಯುವತಿಯರು ಗುಂಪಾಗಿ ಆತನ ಪತ್ತೆಗೆ ಶೋಧ ಆರಂಭಿಸಿದ್ದರು. ತಾರಸಿ ಮೇಲೆ ಪತ್ತೆಯಾದ ಆತನನ್ನು ಎಳೆದು ತಂದು ಹಿಗ್ಗಾಮುಗ್ಗಾ ಥಳಿಸಿದ್ದರು. ಅಲ್ಲಿಂದ ತಪ್ಪಿಸಿಕೊಂಡ ಆತ ತಾರಾ ಕ್ಲಿನಿಕ್ಗೆ ಹೋಗಿ ಚಿಕಿತ್ಸೆ ಪಡೆದಿದ್ದ. ಕ್ಲಿನಿಕ್ ಸಿಬ್ಬಂದಿ ಮಂಗಳೂರು ಉತ್ತರ ಪೊಲೀಸ್ ಠಾಣೆಗೆ ಈ ಕುರಿತು ಮಾಹಿತಿ ನೀಡಿದ್ದರು. ಪೊಲೀಸರು ಹೋಗುವಷ್ಟರಲ್ಲಿ ಆತ ಅಲ್ಲಿಂದ ಪರಾರಿಯಾಗಿದ್ದ.
‘ಗಾಯಗೊಂಡಿರುವ ಯುವಕ ಬಂದಿರುವ ಕುರಿತು ಕ್ಲಿನಿಕ್ನಿಂದ ಮಾಹಿತಿ ಬಂದಿತ್ತು. ನಾವು ಅಲ್ಲಿಗೆ ಹೋಗುವಾಗ ಆತ ಪರಾರಿಯಾಗಿದ್ದ. ಘಟನೆಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಾಗಿಲ್ಲ’ ಎಂದು ಮಂಗಳೂರು ಉತ್ತರ ಠಾಣೆಯ ಪೊಲೀಸರು ತಿಳಿಸಿದ್ದಾರೆ.