ಪುತ್ತೂರು: ಪ್ರಾಚೀನ ಕಾಲದ ಶಾಸನಗಳನ್ನು ಬೆಳಕಿಗೆ ತರುವ ಹಾಗೂ ಸಂರಕ್ಷಿಸುವ ಸಂಬಂಧ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲ್ಲೂಕು ಘಟಕದ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಕನ್ನಡ ಶಾಸನಗಳ ಶೋಧನಾ ಅಧ್ಯಯನ ಮತ್ತು ಸಂರಕ್ಷಣಾ ಯೋಜನೆಗೆ ಶನಿವಾರ ಇಲ್ಲಿನ ಮಹತೋಭಾರ ಮಹಾಲಿಂಗೇಶ್ವರ ದೇವಳದಲ್ಲಿ ಚಾಲನೆ ನೀಡಲಾಯಿತು.
ಪುತ್ತೂರು ಮಹಾಲಿಂಗೇಶ್ವರ ದೇವಳದ ಪ್ರಧಾನ ಅರ್ಚಕ ವಸಂತ ಕೆದಿಲಾಯ ಅವರು, ದೇವಳದ ಒಳಾಂಗಣದಲ್ಲಿರುವ, 14ನೇ ಶತಮಾನದಲ್ಲಿ ವಿಜಯನಗರ ಅರಸರಿಂದ ಸ್ಥಾಪಿತವಾದ ಶಾಸನದ ಮುಂಭಾಗ ಮಾಹಿತಿ ಪತ್ರವನ್ನು ಅನಾವರಣಗೊಳಿಸಿ ಚಾಲನೆ ನೀಡಿದರು.
ಶಾಸನತಜ್ಞ ಉಮಾನಾಥ್ ಶೆಣೈ ಅವರು ದೇವಳದಲ್ಲಿರುವ ಶಾಸನವನ್ನು ಓದಿ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲ್ಲೂಕು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಪುತ್ತೂರು ಯೋಜನೆಯ ಕುರಿತು ಮಾಹಿತಿ ನೀಡಿದರು.