ಮಂಗಳೂರು: ನಗರದ ಪಬ್ ಒಂದರಲ್ಲಿ ಕಾಲೇಜು ವಿದ್ಯಾರ್ಥಿಗಳು ಸಹಪಾಠಿಗಳ ಜೊತೆ ಸೇರಿ ವಿದಾಯಕೂಟ ಆಚರಿಸುತ್ತಿದ್ದ ಸಂದರ್ಭದಲ್ಲಿ ಬಜರಂಗ ದಳದ ಕಾರ್ಯಕರ್ತರು ಸೋಮವಾರ ರಾತ್ರಿ ಅಲ್ಲಿಗೆ ತೆರಳಿ ದಾಂದಲೆ ನಡೆಸಿದ್ದಾರೆ.
ಸಂತೋಷ ಕೂಟವನ್ನು ಸ್ಥಗಿತಗೊಳಿಸಿ ಹೊರ ನಡೆಯಿರಿ ಎಂದು ವಿದ್ಯಾರ್ಥಿಗಳನ್ನು ಬಲವಂತಪಡಿಸಿದ್ದಾರೆ.
ಅಷ್ಟರಲ್ಲಿ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಬಜರಂಗದಳದ ಕಾರ್ಯಕರ್ತರನ್ನು ಸ್ಥಳದಿಂದ ತೆರಳುವಂತೆ ಸೂಚಿಸಿದ್ದಾರೆ. ಈ ಅನಿರೀಕ್ಷಿತ ಬೆಳವಣಿಗೆಯಿಂದ ವಿಚಲಿತರಾದ ವಿದ್ಯಾರ್ಥಿಗಳು ವಿದಾಯಕೂಟವನ್ನು ಅರ್ಧದಲ್ಲೇ ಮೊಟಕುಗೊಳಿಸಿದ್ದಾರೆ ಎಂದು ಗೊತ್ತಾಗಿದೆ.
ಈ ವಿದಾಯಕೂಟದಲ್ಲಿ ಹುಡುಗರು ಹಾಗೂ ಹುಡುಗಿಯರು ಒಟ್ಟಿಗೆ ಭಾಗವಹಿಸಿದ್ದು ಬಜರಂಗದಳದವರ ಕಣ್ಣು ಕೆಂಪಗಾಗಿಸಿತ್ತು.