ಮಂಗಳೂರು: ‘ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಲು ಸುಮಾರು ಮೂರುವರೆ ವರ್ಷ ಬೇಕಾಗಬಹುದು’ ಎಂದು ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಟ್ರಸ್ಟ್ನ ಟ್ರಸ್ಟಿಯೂ ಆಗಿರುವ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಂದಿರದ ಅಡಿಪಾಯದ ಜಾಗವನ್ನು ವಿಸ್ತರಿಸಲು ಟ್ರಸ್ಟ್ ನಿರ್ಧರಿಸಿದೆ. ಮಂದಿರದ ಜೊತೆಗೆ ಆ ಪ್ರದೇಶದ ಸಾಂಸ್ಕೃತಿಕ ಪುನರುತ್ಥಾನ ಕಾಮಗಾರಿಯನ್ನೂ ಕೈಗೊಳ್ಳಲಾಗುತ್ತದೆ’ ಎಂದರು.
ರಾಮನವಮಿಯಂದು ರಾಮನ ವಿಗ್ರಹದ ಮೇಲೆ ಸೂರ್ಯನ ಕಿರಣ ಬೀಳುವಂತೆ ರಾಮ ಮಂದಿರ ನಿರ್ಮಿಸಲು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ. ಈ ರೀತಿಯ ವಿನ್ಯಾಸ ರೂಪಿಸಲು ಕೌನ್ಸಿಲ್ ಆಫ್ ಸೈಂಟಿಫಿಕ್ ಆಂಡ್ ಇಂಡಸ್ಟ್ರಿಯ ಲ್ ರಿಸರ್ಚ್ (ಸಿಎಸ್ಐಆರ್) ಸಂಸ್ಥೆಗೆ ಸೂಚಿಸಲಾಗಿದೆ’ ಎಂದು ತಿಳಿಸಿದರು.
‘ರಾಮನ ವಿಗ್ರಹದ ಎದುರು ಪೂಜೆ ಸಲ್ಲಿಸುವ ಭಕ್ತಾದಿಗಳು 3 ಡಿ ಅನುಭವ ಪಡೆಯುವಂತಾಗಬೇಕು ಎಂಬುದು ಪ್ರಧಾನಿಯ ಆಶಯವಾಗಿದೆ. ಈ ಕಾರ್ಯವನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ವಹಿಸಲಾಗಿದೆ’ ಎಂದರು.
‘ಸುಮಾರು 200 ಅಡಿ ಆಳದವರೆಗೆ ತೆಗ್ಗು ಮಾಡಿ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಭೂಮಿಯ ಧಾರಣಾ ಶಕ್ತಿಯ ಪರೀಕ್ಷೆಯನ್ನು ಮಾಡಲಾಗಿದೆ’ ಎಂದರು.
‘ಹಳೆಯ ಕಟ್ಟಡಗಳನ್ನು ತೆರವುಗೊಳಿಸಿದ್ದು, ಭೂಮಿಯ ಸಮತಟ್ಟು ಮಾಡುವ ಕೆಲಸವನ್ನು ಕೈಗೊಳ್ಳಲಾಗಿದೆ. ಮಂದಿರ ನಿರ್ಮಾಣ ಕಾಮಗಾರಿಯನ್ನು ಎಲ್ ಆಂಡ್ ಟಿ ಹಾಗೂ ಟಾಟಾ ಕಂಪನಿಗಳು ಜಂಟಿಯಾಗಿ ನಿರ್ವಹಿಸಲಿವೆ’ ಎಂದು ತಿಳಿಸಿದರು.
‘ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ವೇದ ಶಿಲ್ಪಕಲಾವಿದರ ತಂಡ ರಚಿಸಲು ನಿರ್ಧರಿಸಲಾಗಿದೆ. ಈ ತಂಡಕ್ಕೆ ನಮ್ಮ ಭಾಗದಿಂದ ಕೃಷ್ಣರಾಜ ತಂತ್ರಿ ಹಾಗೂ ಗುಂಡಿಬೈಲ್ ಸುಬ್ರಹ್ಮಣ್ಯ ಭಟ್ ಅವರ ಹೆಸರು ಸೂಚಿಸಲಾಗಿದೆ’ ಎಂದರು.
‘ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹವನ್ನು ಜನವರಿ 15 ರಿಂದ ಆರಂಭಿಸಲಾಗುವುದು’ ಎಂದು ಹೇಳಿದರು.