ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಮ ಉಲ್ಲಂಘಿಸಿ ಕಟ್ಟಡ ಕಾಮಗಾರಿ?

ಪರಿಸರವಾದಿಗಳಿಂದ ಆರೋಪ, ಸ್ಪಷ್ಟ ಉತ್ತರ ನೀಡದ ಅಧಿಕಾರಿಗಳು
Last Updated 6 ಮೇ 2018, 8:39 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ ಸರ್ಕಾರದ ಆದೇಶವನ್ನು ಸರ್ಕಾರಿ ಆಡಳಿತ ಸಂಸ್ಥೆಗಳೇ ಉಲ್ಲಂಘನೆ ಮಾಡುತ್ತಿದ್ದು, ಪರಿಸರ ಪ್ರೇಮಿಗಳ ಕೆಂಗೆಣ್ಣಿಗೆ ಗುರಿಯಾಗಿದೆ.

ಬಂಡೀಪುರ ಹುಲಿ ಯೋಜನೆಯ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಮಾನಿಟರಿಂಗ್ ಕಮಿಟಿಯ ಅನುಮತಿ ಪಡೆಯದೇ ಯಾವುದೇ ವಾಣಿಜ್ಯ ಚಟುವಟಿಕೆಗಳಿಗೆ ಕಟ್ಟಡ ಕಾಮಗಾರಿಯನ್ನು ನಿರ್ಮಾಣ ಮಾಡಬಾರದು ಎಂಬ ಆದೇಶವಿದ್ದರೂ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ ಲಿಮಿಟೆಡ್ ತಾಲ್ಲೂಕಿನ ಮೇಲುಕಾಮನಹಳ್ಳಿಯಲ್ಲಿರುವ ತಮ್ಮ ಸ್ವಾಮ್ಯದ ಭೂಮಿಯಲ್ಲಿ ಮೂರು ಕಟ್ಟಡಗಳ ಕಾಮಗಾರಿಗಳನ್ನು ನಡೆಸುತ್ತಿದೆ. ಇದರಿಂದ ಸಾರ್ವಜನಿಕರಲ್ಲಿ ಸರ್ಕಾರಕ್ಕೊಂದು, ಸಾರ್ವಜನಿಕರಿಗೊಂದು ನ್ಯಾಯವೇ ಎಂಬ ಭಾವನೆ ಮೂಡಿ ಅರಣ್ಯ ಇಲಾಖೆಯ ಮೇಲೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಸೂಕ್ಷ್ಮ ಪರಿಸರ ವಲಯದಲ್ಲಿ ಹೊಸ ಹೋಟೆಲ್ ನಿರ್ಮಾಣ, ವಾಣಿಜ್ಯೋದ್ಯಮ ಚಟುವಟಿಕೆ ಕೈಗೊಳ್ಳುವುದು, ವಾಣಿಜ್ಯ ಉದ್ದೇಶಗಳಿಗೆ ಭೂಮಿ, ವಾಣಿಜ್ಯ ಉದ್ದೇಶಗಳಿಗೆ ಅಂತರ್ಜಲ ಉಪಯೋಗ, ಖಾಸಗಿ ಜಮೀನುಗಳಲ್ಲಿ ಅಕ್ರಮವಾಗಿ ಹೋಟೆಲ್, ಹೋಮ್‍ಸ್ಟೇ, ಕಾಂಪೌಂಡ್, ವಿದ್ಯುದ್ದೀಕರಣ, ಬೇಲಿ ನಿರ್ಮಾಣ ಮಾಡುವಂತಿಲ್ಲ ಎಂಬ ಆದೇಶವನ್ನು 2012ರಲ್ಲಿ ಕೇಂದ್ರ ಸರ್ಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯ ಆದೇಶವನ್ನು ಹೊರಡಿಸಿತ್ತು.

ಆದರೆ, ಈ ಯಾವ ಆದೇಶಗಳಿಗೆ ಇಲ್ಲಿ ಬೆಲೆ ಇಲ್ಲವೆಂಬಂತೆ ಪ್ರವಾಸೋದ್ಯಮ ಇಲಾಖೆಗೆ ಮಂಜೂರಾಗಿರುವ ಭೂಮಿಗೆ ಕಬ್ಬಿಣದಿಂದ ಬೇಲಿ ಮಾಡಲಾಗಿದೆ. ಸೂಕ್ಷ್ಮ ವಲಯದಲ್ಲಿ ಈಗಾಗಲೇ ಅಕ್ರಮ ರೆಸಾರ್ಟ್ ಮತ್ತು ಹೋಮ್‍ಸ್ಟೇಗಳ ಹಾವಳಿ ಹೆಚ್ಚಾಗುತ್ತಿದ್ದು, ವಾರಂತ್ಯದಲ್ಲಿ ಹೆಚ್ಚು ಜನರು ಈ ಭಾಗಕ್ಕೆ ಬಂದು ಮೋಜು ಮಸ್ತಿಯಲ್ಲಿ ತೊಡಗುತ್ತಿದ್ದಾರೆ. ಹುಲಿ ಸಂರಕ್ಷಿತ ಪ್ರದೇಶದಿಂದ ಕೂಗಳತೆಯ ದೂರದಲ್ಲಿ ಇಂತಹ ಅನೇಕ ಚಟುವಟಿಕೆಗಳು ನಡೆಯುತ್ತಿದ್ದರೂ ಅರಣ್ಯ ಇಲಾಖೆಯವರು ಇದನ್ನು ಪ್ರಶ್ನಿಸುವ ಮತ್ತು ತಡೆಯುವ ಪ್ರಯತ್ನ ಮಾಡುತ್ತಿಲ್ಲ ಎಂಬುದು ಪರಿಸರವಾದಿಗಳ ಆರೋಪ.

ಇಂತಹ ಯಾವುದೇ ಚಟುವಟಿಕೆಗಳನ್ನು ನಡೆಸಬೇಕಾದರೆ ಅರಣ್ಯ ಇಲಾಖೆಗೆ ಪೂರಕ ದಾಖಲೆಗಳೊಡನೆ ಅರ್ಜಿ ಸಲ್ಲಿಸಬೇಕು. ಇಲಾಖೆ ಮಾನಿಟರಿಂಗ್ ಕಮಿಟಿ ಸಭೆಯಲ್ಲಿ ಚರ್ಚಿಸಿ ಅನುಮತಿ ನೀಡುವ ಇಲ್ಲವೆ ತಿರಸ್ಕರಿಸಬಹುದಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಯವರು ಗ್ರಾಮ ಪಂಚಾಯಿತಿ ಕಚೇರಿಗಳ ಮುಂಭಾಗ ಫಲಕಗಳನ್ನು ಆಳವಡಿಸಿ ಪರವಾನಗಿಯನ್ನು ನೀಡದಂತೆ ಸೂಚಿಸಿದೆ.

ಮೇಲುಕಾಮನಹಳ್ಳಿ ಗ್ರಾಮದ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ ಲಿಮಿಟೆಡ್ ವತಿಯಿಂದ ನಡೆಯುತ್ತಿರುವ ಕಾಮಗಾರಿಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಯಾವ ಕಾಮಗಾರಿ ನಡೆಯುತ್ತಿದೆ ಎಂಬ ಮಾಹಿತಿ ಇಲ್ಲ. ಜತೆಗೆ, ಇಲ್ಲಿಗೆ ಅನುಮತಿಗಾಗಿ ಬಂದೇ ಇಲ್ಲ ಎಂದು ಇಲ್ಲಿನ ಪಿಡಿಓ ಕುಮಾರಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಹಿಂದೆ ಇಲ್ಲಿ ಕಾಮಗಾರಿಯನ್ನು ಆರಂಭಿಸಲು ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ ಲಿಮಿಟೆಡ್ ಅವರು ಈ ಹಿಂದೆ ಪಿಸಿಸಿಎಫ್ ಆಗಿದ್ದ ಬಿ.ಜೆ.ಹೊಸಮಠ್ ಮತ್ತು ಬಂಡೀಪುರ ಹುಲಿ ಯೋಜನೆಯ ಮುಖ್ಯ ನಿರ್ದೇಶಕರಾದ ಬಿ.ಪಿ.ಮಲ್ಲೇಶ್ ಅವರ ಅವಧಿಯಲ್ಲಿ ಅನುಮತಿಯನ್ನು ಕೇಳಿದ್ದರು. ಆದರೆ, ಈ ಯೋಜನೆಗೆ ಅನುಮತಿಯನ್ನು ತಿರಸ್ಕರಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

‘ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಿಂದ ಅನುಮತಿ ಪಡೆದುಕೊಂಡು ಕಾಮಗಾರಿ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿಗೆ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಿಂದಲೇ ಮಾಹಿತಿ ಪಡೆದುಕೊಳ್ಳಿ’ ಎಂದು ಬಂಡೀಪುರ ಹುಲಿಯೋಜನೆಯ ನಿರ್ದೇಶಕ ಅಂಭಾಡಿ ಮಾಧವ್ ತಿಳಿಸಿದ್ದಾರೆ.

ಮಾಲೀಕರು ತಮ್ಮ ಜಮೀನುಗಳಲ್ಲಿ ಮನೆ ಕಟ್ಟಿಕೊಳ್ಳುವ ನೆಪದಲ್ಲಿ ಹೋಂ ಸ್ಟೇಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಪರಿಸರ ಸೂಕ್ಷ್ಮ ವಲಯಗಳೆಲ್ಲ ವಾಣಿಜ್ಯ ಉದ್ದೇಶಗಳಿಗೆ ಬಳಕೆಯಾಗುತ್ತಿದೆ. ಇದೀಗ ಸರ್ಕಾರಿ ಸಂಸ್ಥೆಗಳು ರೂಢಿಸಿಕೊಂಡಿವೆ. ಈ ಬಗ್ಗೆ ಅರಣ್ಯ ಇಲಾಖೆ ನಿಗಾ ವಹಿಸಿ ಸಾರ್ವಜನಿಕರ ಮತ್ತು ಪರಿಸರ ಪ್ರೇಮಿಗಳ ನಂಬಿಕೆ ಉಳಿಸಿಕೊಳ್ಳಬೇಕು ಎಂದು ಪರಿಸರ ಪ್ರೇಮಿ ವೇಣುಗೋಪಾಲ್ ಒತ್ತಾಯಿಸಿದ್ದಾರೆ.

ಮೂಲಸೌಕರ್ಯಕ್ಕೆ ಮಾತ್ರ ಆದ್ಯತೆ

ಪರಿಸರ ಸೂಕ್ಷ್ಮವಲಯದ ನಿಬಂಧನೆಗಳು ಉಲ್ಲಂಘನೆಯಾಗುವುದಿಲ್ಲ ಎಂಬ ಅಂಶವನ್ನು ಪರಿಗಣಿಸಿ ಸಿಬ್ಬಂದಿಗೆ ವಸತಿ ಗೃಹ, ಹಾಗೂ ಮೂಲಸೌಕರ್ಯಗಳಂತಹ ಸಿಬ್ಬಂದಿ ವಸತಿ, ವ್ಯವಸ್ಥಾಪಕರ ಕೊಠಡಿ, ಉಗ್ರಾಣ ಹಾಗೂ ವಸತಿ ಆವರಣದ ಭದ್ರತೆಗೆ ಸಂಬಂಧಿಸಿದ ಸೌಲಭ್ಯಗಳನ್ನು ನಿರ್ಮಿಸಿಕೊಳ್ಳಲು ಅನುಮತಿ ನೀಡಲಾಗಿದೆ
- ಜಯರಾಮ್, ಪಿಸಿಸಿಎಫ್, ಮುಖ್ಯ ವನ್ಯಜೀವಿ ಪರಿಪಾಲಕ.

ಎಂ.ಮಲ್ಲೇಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT