ಮಂಗಳೂರು: ಮುಡಿಪು ಸಮೀಪದ ಬಾಳೆಪುಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈರಂಗಳ ದೇವಿನಗರದಲ್ಲಿ ಬಸ್ ನಿಲ್ದಾಣದ ಶಿವಾಜಿ ಫಲಕಕ್ಕೆ ಗುರುವಾರ ರಾತ್ರಿ ಕಿಡಿಗೇಡಿಗಳು ಬಣ್ಣ ಎರಚಿದ್ದು, ಎರಡನೇ ಬಾರಿ ನಡೆದಿರುವುದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಕೈರಂಗಳ ದೇವಿನಗರದಲ್ಲಿ ಛತ್ರಪತಿ ಶಿವಾಜಿ ಫ್ರೆಂಡ್ಸ್ ಸಂಘಟನೆಯ ಯುವಕರು ಸಾರ್ವಜನಿಕ ಬಸ್ ನಿಲ್ದಾಣವನ್ನು ನಿರ್ಮಿಸಿದ್ದರು. ಕೆಲವು ದಿನಗಳ ಹಿಂದೆ ಬಸ್ ನಿಲ್ದಾಣಕ್ಕೆ ಕಿಡಿಗೇಡಿಗಳು ಬಣ್ಣ ಎರಚಿದ್ದರು. ಬಳಿಕ ರಾಜಿ ಸಂಧಾನದ ಮೂಲಕ ಪ್ರಕರಣ ಕೊನೆಗೊಳಿಸಲಾಗಿತ್ತು.
ಗುರುವಾರ ರಾತ್ರಿ ಕಿಡಿಗೇಡಿಗಳು ಮತ್ತೆ ಬಸ್ ನಿಲ್ದಾಣದ ಶಿವಾಜಿ ಫಲಕಕ್ಕೆ ಬಣ್ಣ ಎರಚಿದ್ದಾರೆ. ಇದರಿಂದ ಈ ಭಾಗದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ. ಕೊಣಾಜೆ ಠಾಣೆಯ ಪೊಲೀಸರು ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.