ಮಂಗಳೂರು:ಇಲ್ಲಿನ ಉಳ್ಳಾಲದ ಕಿಲೇರಿಯಾ ನಗರದಲ್ಲಿ ಯುವ ಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್ ನೇತೃತ್ವದ ತಂಡ ಭಾನುವಾರ ತಡರಾತ್ರಿ ಯುವಕನೊಬ್ಬನ ಮೇಲೆ ಗುಂಡಿನ ದಾಳಿ ನಡೆಸಿದೆ.
ಎಂಟು ಮಂದಿಯ ತಂಡ ಕಿಲೇರಿಯಾ ನಗರ ನಿವಾಸಿ ಇರ್ಷಾದ್ ಎಂಬಾತನ ಮೇಲೆ ಐದು ಸುತ್ತು ಗುಂಡು ಹಾರಿಸಿದೆ. ಸ್ಥಳದಲ್ಲಿ ಗುಂಡಿನ ತುಣುಕುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಗುಂಡು ಹಾರಿಸಿದ ಗುಂಪಿನಲ್ಲಿ ರೌಡಿ ಶೀಟರ್ ಗಳೂ ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ದುಷ್ಕರ್ಮಿಗಳ ತಂಡ ಉಳ್ಳಾಲದ ಸಮೀರ್ ಎಂಬುವವರ ಮನೆ ಬಳಿ ಹೋಗಿ ಗಲಾಟೆ ಆರಂಭಿಸಿತ್ತು. ಆಗ ಸ್ಥಳೀಯ ಯುವಕರು ಅವರನ್ನು ಸುತ್ತುವರಿದು ಪ್ರಶ್ನಿಸತೊಡಗಿದರು. ಈ ಸಂದರ್ಭದಲ್ಲಿ ಸುಹೈಲ್ ಕಂದಕ್ ತನ್ನ ಪರವಾನಗಿ ಹೊಂದಿರುವ ರಿವಾಲ್ವರ್ ನಿಂದ ಐದು ಸುತ್ತು ಗುಂಡು ಹಾರಿಸಿದ್ದಾನೆ.
ಬಳಿಕ ಸ್ಥಳದಲ್ಲಿದ್ದ ಯುವಕರು ಸುಹೈಲ್ ಮೇಲೆ ಹಲ್ಲೆ ನಡೆಸಿದ್ದಾರೆ.ಮಂಗಳೂರು ನಗರ ಪೊಲೀಸ್ ಕಮಿಷನರ್ ಡಾ.ಪಿ.ಎಸ್.ಹರ್ಷ, ಡಿಸಿಪಿಗಳಾದ ಅರುಣಾಂಗ್ಷು ಗಿರಿ, ಲಕ್ಷ್ಮೀಗಣೇಶ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಘಟನೆಯ ವಿವರ
ರಾತ್ರಿ 11.30ಕ್ಕೆ ಈ ಘಟನೆ ನಡೆದಿದೆ. ಇರ್ಷಾದ್ ಕಾಲಿಗೆ ಗುಂಡು ತಗುಲಿ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮೀನುಗಾರಿಕಾ ದಕ್ಕೆಯಿಂದ ಹಿಂತಿರುಗುತ್ತಿದ್ದ ಕೆಲವು ಯುವಕರು ಮತ್ತು ಸುಹೈಲ್ ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿದೆ. ಆಗ ಸುಹೈಲ್ ಕಂದಕ್ ಕಾರಿನಲ್ಲಿದ್ದ ಬಷೀರ್ ಎಂಬಾತ ಆಡಿದ ಮಾತಿಗೆ ಸ್ಥಳೀಯ ಯುವಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಂತರ ಗಲಾಟೆ ಆರಂಭವಾಗಿದ್ದು, ಸುಹೈಲ್ ಗುಂಡು ಹಾರಿಸಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಸುಹೈಲ್ ಕಂದಕ್ ರಾಜ್ಯ ಯುವ ಕಾಂಗ್ರೆಸ್ ಸಮಿತಿಯ ಹಾಲಿ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿದ್ದಾನೆ.