ಮಂಗಳೂರು: ಕೋವಿಡ್-19 ಸೋಂಕು ನಿಯಂತ್ರಣ ಹೋರಾಟಕ್ಕಾಗಿ ಟೊಯೋಟಾ ಕಿರ್ಲೋಸ್ಕರ್ ಮೋಟಾರು ಕಂಪನಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ₹2 ಕೋಟಿ ದೇಣಿಗೆ ನೀಡಿದೆ.
ಸಂಕಷ್ಟದಲ್ಲಿರುವ ಬಡಜನರ ಪುನರ್ವಸತಿ ಸೌಲಭ್ಯ ಕಲ್ಪಿಸಲು ₹2 ಕೋಟಿ ಚೆಕ್ ಅನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಟಿಕೆಎಂ ಉಪಾಧ್ಯಕ್ಷ ಹಾಗೂ ಪೂರ್ಣಾವಧಿ ನಿರ್ದೇಶಕ ಶೇಖರ್ ವಿಶ್ವನಾಥನ್ ಮತ್ತು ಟಿಕೆಎಂ ಉಪ ವ್ಯವಸ್ಥಾಪಕ ನಿರ್ದೇಶಕ ರಾಜು ಬಿ.ಕೆಟ್ಕಲೆ ಮತ್ತು ನೌಕರರ ಸಂಘದ ಕಾರ್ಯದರ್ಶಿ ಎಸ್.ದೀಪಕ್ಕುಮಾರ್ ಹಸ್ತಾಂತರಿಸಿದರು.
ಈ ಪೈಕಿ ₹1,35,48,553 ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ದೇಣಿಗೆಯಾಗಿದ್ದು, ಇದನ್ನು ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್ಡಿಎಂಎ) ನೀಡಲಾಗಿದೆ, ಉಳಿದ ₹ 64,51,447 ನೌಕರರಿಂದ ಸಂಗ್ರಹಿಸಲಾಗಿದ್ದು, ಇದನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಲಾಗಿದೆ.
ಕೋವಿಡ್ -19 ಬಿಕ್ಕಟ್ಟಿನ ಸಮಯದಲ್ಲಿ ಟೊಯೋಟಾ ಸಂಪೂರ್ಣವಾಗಿ ಸರ್ಕಾರದ ಬೆಂಬಲಕ್ಕೆ ನಿಂತಿದೆ. ಟೊಯೋಟಾ ಸಮೂಹ ಕಂಪನಿ ಸಹ ₹55ಲಕ್ಷ ಮೊತ್ತವನ್ನು ರಾಜ್ಯ ಸರ್ಕಾರಕ್ಕೆ ದೇಣಿಗೆಯಾಗಿ ನೀಡಿದೆ ಎಂದು ವಿಶ್ವನಾಥನ್ ಹೇಳಿದ್ದಾರೆ.