ಉಜಿರೆ: ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿರುವ ಪರಿಣಾಮ, ಚಾರ್ಮಾಡಿ, ಮುಂಡಾಜೆ, ಕಲ್ಮಂಜ ಗ್ರಾಮದಲ್ಲಿ ಮೃತ್ಯುಂಜಯ ನದಿ ಹಾಗೂ ನೇತ್ರಾವತಿ ನದಿಗಳಿಗೆ ಅಡ್ಡಲಾಗಿ ನಿರ್ಮಿಸಿರುವ ಕಿಂಡಿ ಅಣೆಕಟ್ಟೆಗಳಲ್ಲಿ ತ್ಯಾಜ್ಯ ಸಿಲುಕಿಕೊಂಡಿದ್ದು, ಕೃತಕ ನೆರೆ ಉಂಟಾಗುವ ಆತಂಕ ಎದುರಾಗಿದೆ.
ಶುಕ್ರವಾರ ಮಳೆಯ ಪ್ರಮಾಣ ಇಳಿಮುಖವಾಗಿದೆ. ನೀರಿನ ಹರಿವು ಕಡಿಮೆಯಾದಲ್ಲಿ ತ್ಯಾಜ್ಯಗಳನ್ನು ತೆರವುಗೊಳಿಸಬೇಕು. ಇಲ್ಲವಾದಲ್ಲಿ ಮತ್ತೆ ನಿರಂತರ ಮಳೆ ಸುರಿಯಲಾರಂಭಿಸಿದರೆ, ಕೃತಕ ಪ್ರವಾಹ ಎದುರಾಗಬಹುದು ಎಂದು ಸ್ಥಳೀಯರು ವಿನಂತಿಸಿದ್ದಾರೆ.
ಅಡಿಕೆ ತೋಟಗಳಿಗೆ ಬೋರ್ಡೋ ಮಿಶ್ರಣ ಸಿಂಪರಣೆ ಪ್ರಾರಂಭವಾಗಿದೆ. ಕೆಲವು ತೋಟಗಳಲ್ಲಿ ಕೊಳೆ ರೋಗದ ಲಕ್ಷಣಗಳು ಕಂಡು ಬಂದಿದೆ ಎಂದು ರೈತರು ತಿಳಿಸಿದ್ದಾರೆ.