ಮಂಗಳೂರು:ನಗರದ ನೂತನ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಅವರು ಕುಲಶೇಖರದಲ್ಲಿ ಶನಿವಾರ ಯಕ್ಷಗಾನ ವೀಕ್ಷಿಸಿದರು.
ಸಿನಿಮಾ, ಕ್ರೀಡೆ, ಕೃಷಿ, ಕಲೆ ಬಗ್ಗೆ ಆಸಕ್ತಿಯುಳ್ಳ ಕನ್ನಡಿಗರಾದ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಇದೀಗ ಯಕ್ಷಗಾನ ವೀಕ್ಷಣೆ ಮಾಡಿರುವುದು ಜನಮೆಚ್ಚುಗೆಗೆ ಪಾತ್ರವಾಗಿದೆ.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಮೇಳದ ಶ್ರೀದೇವಿ ಮಹಾತ್ಮೆ ಯಕ್ಷಗಾನವನ್ನು ಕುಲಶೇಖರ ಸ್ಥಳೀಯರು ಆಯೋಜಿಸಿದ್ದರು. ಯಕ್ಷಗಾನದ ಸ್ಥಳಕ್ಕೆ ಬಂದ ಪೊಲೀಸ್ ಕಮಿಷನರ್, ದೂರದಲ್ಲಿಯೇ ನಿಂತು ಯಕ್ಷಗಾನ ವೀಕ್ಷಿಸಿದರು. ಅಲ್ಲದೇ ಸ್ವತಃ ಮೊಬೈಲ್ ಮೂಲಕ ಯಕ್ಷಗಾನದ ಫೋಟೋ, ವಿಡಿಯೊಗಳನ್ನು ಸೆರೆ ಹಿಡಿದರು.
ರಾತ್ರಿ ಸುಮಾರು 2ಗಂಟೆಗಳ ಕಾಲ ಯಕ್ಷಗಾನ ವೀಕ್ಷಿಸಿದ ಪೊಲೀಸ್ ಕಮಿಷನರ್, ಮಹಿಷಾಸುರ ವೇಷದ ಅಬ್ಬರ ವೀಕ್ಷಿಸಿದರು. ಅಲ್ಲದೇ ಚೌಕಿಗೂ ತೆರಳಿ ವೇಷಧಾರಿಗಳಲ್ಲಿ ಮಾತನಾಡಿ ಅವರ ಪಾತ್ರಗಳ ಬಗ್ಗೆ ಆಸಕ್ತಿಯಿಂದ ಕೇಳಿ ತಿಳಿದುಕೊಂಡರು.