ತಾಲ್ಲೂಕಿನ 27 ಗ್ರಾಮ ಪಂಚಾಯಿತಿಗಳ ಪೈಕಿ ಸಂಪಾಜೆ ಹಾಗೂ ಕಲ್ಮಡ್ಕ ಗ್ರಾಮಗಳಲ್ಲಿ ಮಾತ್ರ ಸ್ಥಳ ಗುರುತಿಸಲಾಗಿದೆ. ಜಾಲ್ಸೂರಿನಲ್ಲಿ ಕಾಯ್ದಿರಿಸಿದ ಜಮೀನಿನ ಬಗ್ಗೆ ಆಕ್ಷೇಪಗಳು ಬಂದಿವೆ. ಕಡತ ಎಸಿ ಕಚೇರಿಯಲ್ಲೇ ಬಾಕಿ ಉಳಿದಿದೆ ಎಂದು ಅಲ್ಲಿನ ಪಿಡಿಒ ಹೇಳಿದರು.
ಆದರೆ ಎಸಿ ಅವರನ್ನು ಫೋನ್ ಮೂಲಕ ಸಂಪರ್ಕಿಸಿದ ಕೊರಗಪ್ಪ ನಾಯ್ಕರು, ಅಲ್ಲಿ ಯಾವುದೇ ಆಕ್ಷೇಪಣೆಗಳು ದಾಖಲಾಗದೇ ಇರುವುದನ್ನು ಖಚಿತಪಡಿಸಿಕೊಂಡು ಪಿಡಿಒ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು. ಪಂಜದಲ್ಲಿ ತ್ಯಾಜ್ಯ ಹಾಕಲು ಸ್ಮಶಾನ ಭೂಮಿಯ ಬದಲಿಗೆ ಬೇರೆ ಜಮೀನು ಗುರುತಿಸಲು ಕಂದಾಯ ಇಲಾಖೆಗೆ ತಿಳಿಸಲು ಸೂಚಿಸಲಾಯಿತು.
ಪಿಡಿಒಗಳು ಎಲ್ಲಿಗೆ ಹೋಗುತ್ತಿದ್ದಾರೆ ಎಂದು ಕಚೇರಿ ಪುಸ್ತಕದಲ್ಲಿ ಕಡ್ಡಾಯವಾಗಿ ದಾಖಲು ಮಾಡಬೇಕು. ಸಾರ್ವಜನಿಕರಿಗೆ ಸರಿಯಾಗಿ ಮಾಹಿತಿ ನೀಡುತ್ತಿಲ್ಲ ಎಂದು ಕೊರಗಪ್ಪ ನಾಯ್ಕ ಹೇಳಿದರು.
ಜಿ.ಪಂ. ಉಪಾಧ್ಯಕ್ಷ ರೀತೇಶ್ ಶೆಟ್ಟಿ, ನೂತನ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ತುಳಸಿ ಮದ್ದಿನೇನಿ, ಉಪ ಕಾರ್ಯದರ್ಶಿ ಶಶಿಧರ್, ಜಿ.ಪಂ ಸದಸ್ಯರಾದ ಆಶಾ ತಿಮ್ಮಪ್ಪ, ನವೀನ್ಕುಮಾರ್ ಮೇನಾಲ, ತಾ.ಪಂ. ಅಧ್ಯಕ್ಷೆ ಗುಣವತಿ ಕೊಲ್ಲಂತಡ್ಕ, ಉಪಾಧ್ಯಕ್ಷ ಹರೀಶ್ ರೈ, ಜಿಲ್ಲಾ ನೆರವು ಘಟಕದ ಸಂಯೋಜಕಿ ಮಂಜುಳಾ ಮೊದಲಾದವರು ಉಪಸ್ಥಿತರಿದ್ದರು.