ಮಂಗಳೂರು: `ಕಾನೂನು ನೋಡಬೇಡಿ. ಮಾನವೀಯತೆ ತೋರಿ. ನಮ್ಮಂಥ ಕಡುಬಡವರ ಪಾಲಿಗೆ ಕಾನೂನು ನೆರವಿಗೆ ಬಾರದಿದ್ದರೆ ಇನ್ನು ಯಾರ ಮೊರೆ ಹೋಗುವುದು~. - ಹೀಗೆಂದು ದಲಿತ ಸಮುದಾಯದ ವೆಂಕಮ್ಮ ಹಾಗೂ ಗಿರಿಜಾ ಕಣ್ಣೀರು ಸುರಿಸುತ್ತಾ ಪ್ರಶ್ನಿಸಿದರು. ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನಗರದ ನಂತೂರು ಪದವು ನೇಮು ಶೆಟ್ಟಿ ಕಂಪೌಂಡ್ನಲ್ಲಿ ವಾಸವಿದ್ದ ಇವರ ಮನೆಯನ್ನು ಬುಧವಾರ ತೆರವುಗೊಳಿಸಲಾಗಿತ್ತು.
`ನಾವು ಅವಿವಾಹಿತರು. ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದೇವೆ. ಬೇರೆ ಎಲ್ಲಿಗೆ ಹೋಗುವುದು. ಮಾನವೀಯತೆ ತೋರಿ ಇಲ್ಲಿ ಉಳಿಯಲು ಅವಕಾಶ ನೀಡಿ. ಈಗ ಮನೆಗೆ ಬೀಗ ಹಾಕಲಾಗಿದೆ. ಈ ಮಳೆಯಲ್ಲಿ ಜಗಲಿಯಲ್ಲೇ ವಾಸಿಸುತ್ತಿದ್ದೇವೆ~ ಎಂದು ಅವರು ಅಳಲು ತೋಡಿಕೊಂಡರು.
ಕೋರ್ಟ್ ಆದೇಶ ಆಗಿ ಮೂರು ದಿನವಷ್ಟೇ ಆಗಿದೆ. ಒಂದು ತಿಂಗಳವರೆಗೆ ಅವಕಾಶ ಇದೆ. ಆದರೆ ಜಾಗದ ಮಾಲೀಕರು ಪೊಲೀಸ್ ಹಾಗೂ ಗೂಂಡಾಗಳ ನೆರವಿನಿಂದ ಮನೆ ತೆರವು ಮಾಡಿ ದೌರ್ಜನ್ಯ ಎಸಗಿದ್ದಾರೆ~ ಎಂದು ಅವರು ದೂರಿದರು.
`ನಾವು 80 ವರ್ಷದಿಂದ ಇಲ್ಲಿ ವಾಸ ಇದ್ದೇವೆ. ಪಡಿತರ ಚೀಟಿ, ಮತದಾರರ ಗುರುತು ಚೀಟಿ ಸಿಕ್ಕಿದೆ. 1997ರಲ್ಲಿ ಡಿಕ್ಲರೇಷನ್ಗೆ ಅರ್ಜಿ ಹಾಕಿದ್ದೇವೆ. ಅದರ ಸ್ವೀಕೃತಿ ಪ್ರತಿ ಇದೆ. ಜಾಗದ ಮಾಲೀಕರಿಗೆ ತೊಂದರೆ ಕೊಡುವುದಿಲ್ಲ. ಮೂರು ಸೆಂಟ್ಸ್ ಜಾಗ ನೀಡಿ~ ಎಂದು ಅವರು ವಿನಂತಿಸಿದರು.
ವಾಜಪೇಯಿ ವಸತಿ ಯೋಜನೆ ಅಡಿಯಲ್ಲಿ ಪಾಲಿಕೆಯಲ್ಲಿ ಅರ್ಜಿ ಸಲ್ಲಿಸಲಾಗಿದೆ. ಅಲ್ಲಿ ನಿವೇಶನ, ಮನೆ ಸಿಕ್ಕಿದರೆ ಅಲ್ಲಿಗೆ ಹೋಗುತ್ತೇವೆ. ಅದು ಸಿಗುವವರೆಗಾದರೂ ಇಲ್ಲಿ ಉಳಿಯಲು ಅವಕಾಶ ನೀಡಿ~ ಎಂದು ಅವರು ಮನವಿ ಮಾಡಿದರು.
ಇವರು ಬಾಲಕೃಷ್ಣ ಶೆಟ್ಟಿ ಹಾಗೂ ಲೀಲಾವತಿ ಶೆಟ್ಟಿ ಎಂಬವರ ಜಾಗದಲ್ಲಿ ಹಲವು ವರ್ಷಗಳಿಂದ ವಾಸ ಇದ್ದರು.