ಕಾಸರಗೋಡು: ಜಿಲ್ಲೆಯಲ್ಲಿ ಶಿಕ್ಷಕರ ಖಾಲಿ ಹುದ್ದೆಗಳ ಸಹಿತ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ತೆರವಾಗಿರುವ ಹುದ್ದೆಗಳಿಗೆ ದಿನ ವೇತನ ವ್ಯವಸ್ಥೆಯಡಿ ಉದ್ಯೋಗ ವಿನಿಮಯ ಕಚೇರಿ ಮೂಲಕ ನೇಮಕಾತಿ ನಡೆಸಬೇಕು ಎಂದು ಕಾಸರಗೋಡು ತಾಲ್ಲೂಕು ಅಭಿವೃದ್ಧಿ ಸಮಿತಿ ಸಭೆ ಸೂಚಿಸಿದೆ.
ಜಿಲ್ಲೆಯಲ್ಲಿ ಕೆಎಸ್ಆರ್ಟಿಸಿ-ಖಾಸಗಿ ಬಸ್ಸುಗಳ ನಿಲುಗಡೆ ದರ, ದರ ಏಕೀಕರಣ, ಕಾಸರಗೋಡು-ಮಂಗಳೂರು ರಸ್ತೆಯಲ್ಲಿ ಮತ್ತಷ್ಟು ನಿಲುಗಡೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಕೃಷಿಗೆ ಸೀಮೆಎಣ್ಣೆ ಅಗತ್ಯವಿರುವ ಯಥಾರ್ಥ ಕೃಷಿಕರಿಗೆ ಪರ್ಮಿಟ್ ಮಂಜೂರು ಮಾಡಬೇಕು. ತಾಲ್ಲೂಕಿನ ಕೃಷಿ ಕಚೇರಿಯಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಸಭೆ ಸರ್ಕಾರವನ್ನು ಒತ್ತಾಯಿಸಿದೆ.
ಕಳೆದ ಮಳೆಗಾಲದಲ್ಲಿ ಹಾನಿಯಾದ ವರ್ಕಾಡಿ ಪಂಚಾಯಿತಿಯ ಆನೆಕಲ್ಲು ಅಣೆಕಟ್ಟಿನ ಪುನರ್ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಬಾವಿಕ್ಕರೆ ಅಣೆಕಟ್ಟಿನ ನಿರ್ಮಾಣ ಪೂರ್ಣಗೊಂಡಿದೆ ಎಂದು ಸಂಬಂಧಪಟ್ಟವರು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಫರೀದಾ ಸಕೀರ್ ಅಧ್ಯಕ್ಷತೆ ವಹಿಸಿದ್ದರು. ಸದಸ್ಯೆ ಮಮತಾ ದಿವಾಕರ್, ಮಂಜೇಶ್ವರ ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಮುಮ್ತಾಜ್ ಸಮೀರಾ, ವಿವಿಧ ಪಂಚಾಯಿತಿಗಳ ಅಧ್ಯಕ್ಷರಾದ ಎನ್.ಗೀತಾ ದೇಲಂಪಾಡಿ, ಷಂಷಾದ್ ಷುಕೂರ್ ಮೀಂಜ, ಪಿ.ಎಚ್.ರಮ್ಲಾ ಕುಂಬಳೆ, ವಿ.ಭವಾನಿ ಮುಳಿಯಾರು ಇದ್ದರು.