ಪುರಸಭೆ ವಿರೋಧಪಕ್ಷ ನಾಯಕ ಮಹಮ್ಮದ್ ಆಲಿ ಮತ್ತು ಜೆಡಿಎಸ್ ಮಹಿಳಾ ಘಟಕ ಅಧ್ಯಕ್ಷೆ ಪದ್ಮಾ ಮಣಿ ನಡುವೆ ಮಾತಿನ ಚಕಮಕಿ ನಡೆದಿದ್ದು ಪ್ರಕರಣ ಕುತೂಹಲ ಕೆರಳಿಸಿದೆ.
ಘಟನೆ ಕುರಿತು ಮಹಮ್ಮದ್ ಆಲಿ ಅವರು ಪುರಸಭಾ ಮುಖ್ಯಾಧಿಕಾರಿ ದೂರು ನೀಡಿದ್ದಾರೆ. `ಕಚೇರಿಯಲ್ಲಿದ್ದ ಸಂದರ್ಭ ಪದ್ಮಾ ಮಣಿ ಅವರು ಅವಾಚ್ಯ ಶಬ್ದಗಳಿಂದ ನಿಂದಿದಿಸಿ ಅವಮಾನ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಪದ್ಮಾ ಮಣಿ ಪ್ರತಿದಿನ ಕಚೇರಿಗೆ ಬಂದು ಆಶ್ರಯ ನಿವೇಶನದ ಫಲಾನುಭವಿಗಳ ಬಗ್ಗೆ ವಿಚಾರಿಸುತ್ತಿದ್ದು ಫಲಾನುಭವಿಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ದೂರುಗಳಿವೆ.
ಈ ಕುರಿತು ಪುರಸಭೆ ಸಾಮಾನ್ಯ ಸಭೆಯಲ್ಲಿ ತಾನು ಪ್ರಸ್ತಾಪಿಸಿದಕ್ಕಾಗಿ ತನ್ನ ಮೇಲೆ ದ್ವೇಷ ಸಾಧಿಸಿ ಅವಮಾನ ಮಾಡಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಮಹಮ್ಮದ್ ಆಲಿಯವರ ದೂರಿನ ಹಿನ್ನಲೆಯಲ್ಲಿ ಪುರಸಭಾ ಮುಖ್ಯಾಧಿಕಾರಿ ಅವರ ದೂರಿನ ಜತೆಗೆ ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣದ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಇದೇ ಘಟನೆಗೆ ಸಂಬಂಧಿಸಿ ಪದ್ಮಾ ಮಣಿಯನ್ ಅವರು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಸಾಲ ಸೌಲಭ್ಯಕ್ಕಾಗಿ ಪುರಸಭೆ ಕಚೇರಿಗೆ ಹೋಗಿ ಗುಮಾಸ್ತೆಯೊಬ್ಬರ ಕೌಂಟರ್ ಬಳಿ ಕುಳಿತಿದ್ದೆ. ಆ ವೇಳೆ ಮಹಮ್ಮದ್ ಆಲಿ ಅವರು ತಾನು ಮಧ್ಯವರ್ತಿ ಕೆಲಸ ಮಾಡುತ್ತಿದ್ದೇನೆ ಎಂದು ಆರೋಪಿಸಿ ಮುಖ್ಯಾಧಿಕಾರಿಗೆ ತಿಳಿಸಿದ್ದರು.