ಸುಳ್ಯ: ದೇಶದಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ರಾಷ್ಟ್ರೀಯ ಕೃಷಿ ನೀತಿಯನ್ನು ಜಾರಿಗೆ ತರುವ ಅಗತ್ಯವಿದೆ ಎಂದು ವಿಧಾನಸಭಾ ಅಧ್ಯಕ್ಷ ಕೆ.ಜಿ.ಬೋಪಯ್ಯ ಹೇಳಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಪಾಜೆ ವಲಯ ಕೃಷಿ ಉತ್ಸವ ಸಮಿತಿ ಆಶ್ರಯದಲ್ಲಿ ಅರಂತೋಡು ನೆಹರೂ ಸ್ಮಾರಕ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಕೃಷಿ ಉತ್ಸವದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ಕೃಷಿ ಅಭಿವೃದ್ಧಿಗಾಗಿ ಶೇ 1ರ ದರದಲ್ಲಿ ರೈತರಿಗೆ ಸಾಲ ನೀಡುತ್ತಿದೆ. ಅಗತ್ಯ ಉಪಕರಣಗಳ ಖರೀದಿಗೆ ಶೇ 50ರಷ್ಟು ಸಹಾಯಧನವನ್ನೂ ನೀಡುತ್ತಿದೆ. ಹಾಗಿದ್ದೂ ರೈತರ ಆತ್ಮಹತ್ಯೆಗಳು ನಿಂತಿಲ್ಲ. ನಾವು ಎಲ್ಲೋ ತಪ್ಪುತ್ತಿದ್ದೇವೆ. ಈ ಕುರಿತು ಚಿಂತನೆ ಆಗಬೇಕು ಎಂದ ಅವರು, ಬೆಂಬಲ ಘೋಷಣೆಯಿಂದ ರೈತರಿಗೆ ಎಷ್ಟು ಪ್ರಯೋಜನವಾಗುತ್ತಿದೆ ಎಂಬ ಕುರಿತೂ ಅಧ್ಯಯನ ಮಾಡಬೇಕು. ಬೆಂಬಲ ಬೆಲೆಯಲ್ಲಿ ಖರೀದಿಸುವಾಗ ರೈತರಿಗೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ ಎಂದರು.
ಸಮಾಜ, ರಾಷ್ಟ್ರ ಅಭಿವೃದ್ಧಿ ಆಗಬೇಕಾದರೆ ರೈತರ ಬದುಕು ಹಸನ್ಮುಖಿಯಾಗಬೇಕು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರು ದೂರದೃಷ್ಠಿಯ ಯೋಜನೆಯಿಂದ ರೈತರು ಸ್ವಾವಲಂಭಿಗಳಾಗಿ ಬಾಳಲು ಸಧ್ಯವಾಗಿದೆ. ಯೋಜನೆ ಇಂದು ರಾಜ್ಯದ 11 ಜಿಲ್ಲೆಗಳಲ್ಲಿ ಅನುಷ್ಠಾನಗೊಂಡಿದೆ. ಶಿಕ್ಷಣ, ಆರೋಗ್ಯ, ಸಮಾಜದಲ್ಲಿರುವ ಪಿಡುಗಳನ್ನು ಹೋಗಲಾಡಿಸುವ ಮದ್ಯವರ್ಜನ ಶಿಬಿರಗಳನ್ನು ನಡೆಸುವ ಮೂಲಕ ಮಾದರಿ ಸಮಾಜ ನಿರ್ಮಾಣದಲ್ಲಿ ಯೋಜನೆ ನಿರತವಾಗಿದೆ ಎಂದು ಪ್ರಶಂಶಿಸಿದರು.
ರೈತರು ಬೆಳೆದ ಬೆಳೆಗೆ ಆತನೇ ಬೆಲೆಯನ್ನು ಕಟ್ಟಲು ಸಾಧ್ಯವಾದರೆ ಮಾತ್ರ ಆತನ ಉದ್ಧಾರ ಸಾಧ್ಯವಾಗಬಹುದು ಮತ್ತು ಆ ಮೂಲಕ ದೇಶ ಕೂಡಾ ಉದ್ಧಾರವಾಗಬಹುದು ಎಂದವರು ಹೇಳಿದರು.
ಉಪನ್ಯಾಸಕ ನರೇಂದ್ರ ರೈ ದೇರ್ಲ ಮಾತನಾಡಿ, ರೈತರಲ್ಲಿ ಸಾಂಘಿಕ ಶಕ್ತಿ, ಸಾಂಸ್ಥಿಕ ಹೋರಾಟವನ್ನು ಮೂಡಿಸಿದ್ದು ಗ್ರಾಮಾಭಿವೃದ್ಧಿ ಯೋಜನೆ. ಇದು ಕೃಷಿ ಪಲ್ಲಟಕ್ಕೆ ತಡೆ ಹಾಕಿದೆ. ರೈತ ಆತ್ಮಹತ್ಯೆಗಳನ್ನು ತಡೆಯವು ಕೆಲಸ ಮಾಡುತ್ತಿದೆ ಎಂದರು.
ಕೃಷಿ ಪಂಡಿತ ಪುರಸ್ಕೃತ ಅಪ್ಪಾಜಿ ರಾವ್ ಉತ್ಸವವನ್ನು ಭತ್ತದ ಪೈರು ನಾಟಿ ಮಾಡುವ ಮೂಲಕ ಉದ್ಘಾಟಿಸಿದರು. ಯೋಜನೆಯ ನಿರ್ದೇಶಕ ಎ.ಶ್ರೀಹರಿ, ತಾ.ಪಂ. ಸದಸ್ಯೆ ಜಯಂತಿ ತೊಡಿಕಾನ, ಅರಂತೋಡು ಗ್ರಾ.ಪಂ. ಅಧ್ಯಕ್ಷೆ ವಸಂತಿ ಬಾಳೆಕಜೆ, ಕಾಲೇಜು ಪ್ರಾಂಶುಪಾಲ ಕೆ.ಆರ್.ಗಂಗಾಧರ್ ವೇದಿಕೆಯಲ್ಲಿದ್ದರು.
ಲಾಭದಾಯಕ ಹೈನುಗರಿಕೆ, ತೋಟಗರಿಕಾ ಕೃಷಿಯಲ್ಲಿ ಮಿಶ್ರ ಬೆಳೆ ಹಾಗೂ ಪರ್ಯಾಯ ಬೆಳೆ, ಸಾವಯವ ಕೃಷಿ ಮತ್ತು ನೈಸರ್ಗಿಕ ಕೃಷಿ, ಕೃಷಿ ಯಾತ್ರೀಕರಣ-ಕೃಷಿಕರ ಕಾರ್ಯಕ್ಷಮತಾ ಅಭಿವೃದ್ಧಿ ಕುರಿತ ಗೋಷ್ಠಿಗಳು ಸಂವಾದಗಳ ನಡೆದವು. ಸುಮಾರು 50ಕ್ಕೂ ಮಿಕ್ಕಿ ವಸ್ತುಪ್ರದರ್ಶನ ಮಳಿಗೆಗಳಿದ್ದವು.
ದೇವಿ ಪ್ರಸಾದ್ ಬಡ್ಡಡ್ಕ ಮತ್ತವರ ತಂಡದವರು ನಿರ್ಮಿಸಿದ ಗ್ರಾಮೀಣ ಶೈಲಿಯ ಆಕರ್ಷಕ ವೇದಿಕೆ ಎಲ್ಲರ ಗಮನ ಸೆಳೆಯಿತು.
ಯೋಜನಾಧಿಕಾರಿ ಯೋಗೀಶ್, ಉತ್ಸವ ಸಮಿತಿ ಅಧ್ಯಕ್ಷ ಪಿ.ಬಿ.ದಿವಾಕರ ರೈ, ಪದಾಧಿಕಾರಿಗಳಾದ ಭವಾನಿಶಂಕರ ಅಡ್ತಲೆ, ಲೋಕನಾಥ ಅಮೆಚೂರು, ಕೇಶವ ಪ್ರಸಾದ್ ತೊಡಿಕಾನ, ಜತ್ತಪ್ಪ ಮಾಸ್ಟರ್, ಮೇಲ್ವಿಚಾರಕಿ ಗಾಯತ್ರಿ, ಕೃಷಿ ಅಧಿಕಾರಿ ಗೀತಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.