ಉಳ್ಳಾಲ: ಸಂಶೋಧನೆಗಳಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದು ನಿಟ್ಟೆ ವಿ.ವಿ. ಕುಲಪತಿ ಡಾ.ಎಸ್.ರಮಾನಂದ ಶೆಟ್ಟಿ ಅಭಿಪ್ರಾಯಪಟ್ಟರು.
ಅವರು ದೇರಳಕಟ್ಟೆಯ ಪಾನೀರುವಿನ ನಿಟ್ಟೆ ಗುಲಾಬಿ ಶೆಟ್ಟಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಫಾರ್ಮಸ್ಯೂಟಿಕಲ್ ಸೈನ್ಸಸ್ನ ಆಶ್ರಯದಲ್ಲಿ, ನವದೆಹಲಿಯ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಪ್ರಾಯೋಜಕತ್ವದಲ್ಲಿ ಶುಕ್ರವಾರ ಬ್ಯಾಂಕಿಂಗ್ ಆಂಡ್ ಫೈನಾನ್ಸ್ ಸಭಾಂಗಣದಲ್ಲಿ ಜರುಗಿದ `ಔಷಧೀಯ ಸಸ್ಯಗಳು ಮತ್ತು ಮಾನಸಿಕ ಆರೋಗ್ಯ' ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ವಿವಿಧ ಕ್ಷೇತ್ರಗಳಲ್ಲಿ ಸಂಶೋಧನೆಗಳಿಗೆ ಸಾಕಷ್ಟು ಅನುದಾನ ಕೊಡುವ ಸಂಸ್ಥೆಗಳಿವೆ. ಆದರೆ ಅದನ್ನು ತಕ್ಕಮಟ್ಟಿನಲ್ಲಿ ವಿನಿಯೋಗಿಸುವ ಕಾರ್ಯ ಆಗುತ್ತಿಲ್ಲ. ಅಂತಹ ಸಂಸ್ಥೆಗಳೊಂದಿಗೆ ಸಂಬಂಧ ಗಟ್ಟಿಯಾಗಿಸಿ ನಿರಂತರ ಸಂಶೋಧನೆಗಳನ್ನು ಮಾಡುವುದರೊಂದಿಗೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಯೊಂದಿಗೆ ದೇಶದ ಅಭಿವೃದ್ಧಿ ಸಾಧ್ಯ ಎಂದರು.
ಫಾರ್ಮಕಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಹಿಮಾಂಶು ಜೋಷಿ, ನಿಟ್ಟಿ ವಿ.ವಿಯ ಸಂಶೋಧನೆ ಮತ್ತು ಅಭಿವೃದ್ಧಿ ನಿರ್ದೇಶಕ ಡಾ.ಅರುಣಾಚಲಂ ಕುಮಾರ್, ಸಿಬ್ಬಂದಿ ವಿಭಾಗದ ನಿರ್ದೇಶಕ ಡಾ.ರಾಜಶೇಖರ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಎಸ್.ಶಾಸ್ತ್ರಿ ಸ್ವಾಗತಿಸಿದರು. ವಿದ್ಯಾರ್ಥಿನಿ ರೈನಾ ಐಮನ್ ನಿರೂಪಿಸಿದರು. ಸಹ ಪ್ರಾಧ್ಯಾಪಕ ಡಾ.ಗುರುರಾಜ್ ವಂದಿಸಿದರು.