ದಾವಣಗೆರೆ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಇಲ್ಲಿನ ವಿನೋಬ ನಗರದ ಜಗದ್ಗುರು ಜಯದೇವ ಮುರುಘರಾಜೇಂದ್ರ ಪ್ರೌಢಶಾಲೆಯಿಂದ 150 ಅಡಿ ಉದ್ದದ ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳನ್ನೊಳಗೊಂಡ ರಾಷ್ಟ್ರಧ್ವಜದ ಮೆರವಣಿಗೆ ನಡೆಯಿತು.
ವಿನೋಬ ನಗರದ 1ನೇ ಮುಖ್ಯರಸ್ತೆಯ ಶಾಲೆಯಿಂದ ಹೊರಟ ಮೆರವಣಿಗೆ ಪಿ.ಬಿ. ರಸ್ತೆ, ಅರುಣಾ ಟಾಕೀಸ್, ಕಿತ್ತೂರು ರಾಣಿ ಚನ್ನಮ್ಮ ಸರ್ಕಲ್, ಎ.ವಿ.ಕೆ. ಕಾಲೇಜು ರಸ್ತೆ, ರಾಮ್ ಅಂಡ್ ಕೊ ಸರ್ಕಲ್, ಚರ್ಚ್ ರಸ್ತೆಯ ಮೂಲಕ ವಿದ್ಯಾ ಸಂಸ್ಥೆಗೆ ಬಂದು ಸೇರಿತು.
ರಾಷ್ಟ್ರಧ್ವಜದಲ್ಲಿ 75 ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರದ ಜೊತೆಗೆ ಅವರ ಜನನ, ಸ್ಥಳ ವಿವರಗಳನ್ನು ಒಳಗೊಂಡ ರೇಖಾಚಿತ್ರ ಗಮನ ಸೆಳೆಯಿತು. ಅವರಲ್ಲಿ 16 ಮಂದಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿಯರ ವಿವರಗಳು ಇದ್ದವು.
‘ಜನರಿಗೆ 15ರಿಂದ 20 ಸ್ವಾತಂತ್ರ್ಯ ಹೋರಾಟಗಾರರು ಮಾತ್ರ ಗೊತ್ತಿರುತ್ತದೆ. ಉಳಿದವರು ಅಷ್ಟಾಗಿ ಪರಿಚಯವಿರುವುದಿಲ್ಲ. ಅವರ ವಿವರಗಳನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇನೆ. 30 ಮಂದಿ ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರ ವಿವರಗಳು ಇದ್ದು, ವಿದ್ಯಾರ್ಥಿಗಳ ಸಮ್ಮುಖದಲ್ಲೇ ಚಿತ್ರಗಳನ್ನು ಬಿಡಿಸಲಾಯಿತು’ ಎಂದು ಚಿತ್ರಕಲಾ ಶಿಕ್ಷಕ ಶಾಂತಯ್ಯ ಪರಡಿಮಠ ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ನಿರಂಜನಮೂರ್ತಿ ಮೆರವಣಿಗೆಗೆ ಚಾಲನೆ ನೀಡಿದರು. ಪಾಲಿಕೆ ಸದಸ್ಯ ಎ.ನಾಗರಾಜ್, ಸಂಸ್ಥೆಯ ಕಾರ್ಯದರ್ಶಿ ಮನೋಹರ್ ಎಸ್. ಚಿಗಟೇರಿ, ಮುಖ್ಯ ಶಿಕ್ಷಕ ಎಸ್. ನಾಗರಾಜ್, ಶಿಕ್ಷಕರಾದ ಎಚ್.ಜಿ. ಜ್ಯೋತಿ, ಹಾಲಪ್ಪ, ಪ್ರಭುದೇವ್ ಇದ್ದರು.