ಚನ್ನಗಿರಿ: ಪಟ್ಟಣ ಸೇರಿ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಗುರುವಾರ ಭಾರಿ ಮಿಂಚು, ಗುಡುಗು ಹಾಗೂ ಸಿಡಿಲಿನಿಂದ ಕೂಡಿದ ಮಳೆಯಾಗಿದೆ.
ಮಾಚನಾಯಕನಹಳ್ಳಿ ಗ್ರಾಮದ ಜಮೀನಿನಲ್ಲಿ ಮೇಯುತ್ತಿದ್ದ ಕುರಿ ಮತ್ತು ಮೇಕೆ ಹಿಂಡುಗಳಿಗೆ ಸಿಡಿಲು ಬಡಿದ ಪರಿಣಾಮ 35 ಕುರಿ ಮತ್ತು ಮೇಕೆಗಳು ಸಾವನ್ನಪ್ಪಿವೆ.
ತಿಪ್ಪಗೊಂಡನಹಳ್ಳಿ ಗೊಲ್ಲರಹಟ್ಟಿ ಗ್ರಾಮದ ಕುರಿ ಸಾಕಾಣಿಕೆದಾರರಾದ ಚಿತ್ತಪ್ಪ, ವೀರೇಶಪ್ಪ ಹಾಗೂ ಕಾಟಪ್ಪಅವರು ಕುರಿ ಮತ್ತು ಮೇಕೆಗಳ ಹಿಂಡುಗಳನ್ನು ಮಾಚನಾಯಕನಹಳ್ಳಿ ಗ್ರಾಮದ ಬಳಿ ಮೇಯಿಸಿಕೊಂಡು ಬರಲು ಬಂದಿದ್ದರು. ಕುರಿ ಹಿಂಡುಗಳನ್ನು ಕಾಯುವವರಿಗೆ ಯಾವುದೇ ಹಾನಿಯಾಗಿಲ್ಲ.
ವಿಷಯ ತಿಳಿದ ಕೂಡಲೇ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕೃತಿ ವಿಕೋಪ ಪರಿಹಾರ ಯೋಜನೆ ಅಡಿ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸಲಾಗುವುದು ಎಂದು ತಿಳಿಸಿದರು.
ತಹಶೀಲ್ದಾರ್ ಡಾ.ಪಟ್ಟರಾಜಗೌಡ, ಪಶು ವೈದ್ಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಅಶೋಕ್ ಕುಮಾರ್, ಪಿಎಸ್ಐ ಕೆ.ಎನ್. ಚಂದ್ರಶೇಖರ್, ಎಪಿಎಂಸಿ ಮಾಜಿ ಅಧ್ಯಕ್ಷ ಟಿ. ನಾಗರಾಜ್, ಜಯ್ಯಪ್ಪ, ಕಾಟಪ್ಪ ಉಪಸ್ಥಿತರಿದ್ದರು.