ದಾವಣಗೆರೆ: ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಕಾನೂನು ಸೇವಾ ಪ್ರಾಧಿಕಾರದಿಂದ ಶನಿವಾರ ನಡೆದ ಮೆಗಾ ಇ-ಲೋಕ್ ಅದಾಲತ್ನಲ್ಲಿ ವ್ಯಾಜ್ಯಪೂರ್ವ 224 ಪ್ರಕರಣಗಳು ಮತ್ತು ವಿಚಾರಣೆಗೆ ಬಾಕಿ ಇದ್ದ 3,764 ಒಟ್ಟು 3,988 ಪ್ರಕರಣಗಳು ಇತ್ಯರ್ಥಗೊಂಡಿವೆ. ₹ 10.16 ಕೋಟಿ ಪರಿಹಾರ ಕೊಡಿಸಲಾಯಿತು.
ರಾಜೀಯಾಗಬಲ್ಲ ಕ್ರಿಮಿನಲ್ ಅಪರಾಧಗಳು 20 ಇತ್ಯರ್ಥಗೊಂಡಿವೆ. ₹ 32,500 ಪರಿಹಾರ ಒದಗಿಸಲಾಗಿದೆ. 63 ಚೆಕ್ ಬೌನ್ಸ್ ಪ್ರಕರಣಗಳನ್ನು ರಾಜಿಯಲ್ಲಿ ಮುಗಿಸಲಾಗಿದೆ. ₹ 1.15 ಕೋಟಿ ಪರಿಹಾರದ ತೀರ್ಪು ನೀಡಲಾಗಿದೆ.
ಬ್ಯಾಂಕ್ ವ್ಯವಹಾರಕ್ಕೆ ಸಂಬಂಧಿಸಿದಂತೆ 35 ವ್ಯಾಜ್ಯಪೂರ್ವ ಪ್ರಕರಣಗಳಲ್ಲಿ ₹ 22.14 ಲಕ್ಷ ಪರಿಹಾರ ಒದಗಿಸಲಾಯಿತು. ಬಾಕಿ ಪ್ರಕರಣಗಳಲ್ಲಿ 8 ಇತ್ಯರ್ಥಪಡಿಸಿ ₹ 16.87 ಲಕ್ಷ ಪರಿಹಾರ ಕೊಡಿಸಲಾಯಿತು.
ಹಣ ವಸೂಲಾತಿ ಪ್ರಕರಣಗಳಲ್ಲಿ ಬಾಕಿ ಇದ್ದವುಗಳಲ್ಲಿ 7 ಪ್ರಕರಣ ಇತ್ಯರ್ಥಗೊಂಡು ₹ 14.31 ಲಕ್ಷ ಕೊಡಿಸಲಾಯಿತು.
ವಾಹನ ಅಪಘಾತಕ್ಕೆ ಸಂಬಂಧಿಸಿದಂತೆ 96 ಪ್ರಕರಣಗಳು ರಾಜೀಯಲ್ಲಿ ಮುಗಿಸಲಾಯಿತು. ಸಂತ್ರಸ್ತರಿಗೆ ₹ 3.98 ಕೋಟಿ ಪರಿಹಾರ ಒದಗಿಸಲಾಯಿತು. ಕಾರ್ಮಿಕರಿಗೆ ಸಂಬಂಧಿಸಿದ 3 ಸಮಸ್ಯೆ ಸರಿಪಡಿಸಲಾಯಿತು. ₹ 11.5 ಲಕ್ಷ ಕೊಡಿಸಲಾಯಿತು.
ವಿದ್ಯುತ್ಗೆ ಸಂಬಂಧಿಸಿದಂತೆ 156 ಪ್ರಕರಣಗಳನ್ನು ಇತ್ಯರ್ಥಪಡಿಸಿ ₹ 4.47 ಲಕ್ಷ ಪರಿಹಾರ ನೀಡಲು ಆದೇಶ ನೀಡಲಾಯಿತು. ಬಾಡಿಗೆ ವಿವಾದ ಸಹಿತ ಇತರ ನಾಗರಿಕ ಪ್ರಕರಣಗಳಿಗೆ ಸಂಬಂಧಿಸಿದಂತೆ 175 ಇತ್ಯರ್ಥಪಡಿಸಿ ₹ 3.94 ಕೋಟಿ ಪರಿಹಾರ ನೀಡಲು ಆದೇಶಿಸಲಾಯಿತು.
ಇತರ ಪಿಟ್ಟಿ ಕೇಸ್ ಸಹಿತ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ 2952 ರಾಜಿಯಲ್ಲಿ ಮುಗಿದವು. ₹ 36.19 ಪರಿಹಾರ ಒದಗಿಸಲಾಯಿತು. ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಗೀತಾ ಕೆ.ಬಿ. ನೇತೃತ್ವದಲ್ಲಿ ಜಿಲ್ಲೆಯ ಎಲ್ಲ 24 ನ್ಯಾಯಾಲಯಗಳಲ್ಲಿ ಇ–ಲೋಕ ಅದಲಾತ್ ನಡೆಯಿತು ಎಂದು ಕಾನೂನು ಸೇವಾ ಪ್ರಾಧಿಕಾರದ ಜಿಲ್ಲಾ ಸದಸ್ಯ ಕಾರ್ಯದರ್ಶಿ ಸಾಬಪ್ಪ ತಿಳಿಸಿದ್ದಾರೆ.