ದಾವಣಗೆರೆ:ಕೆಎಸ್ಆರ್ಟಿಸಿ ನೌಕರರ ಮುಷ್ಕರ ಮುಂದುವರಿದಿದೆ. ಜಿಲ್ಲೆಯಲ್ಲಿ ಶುಕ್ರವಾರವೂ ಹೆಚ್ಚಿನ ಸಾರಿಗೆ ಬಸ್ಗಳು ಸಂಚರಿಸಿದ್ದು, ಅಧಿಕಾರಿಗಳಲ್ಲಿ ಸಮಾಧಾನ ತಂದಿದೆ.
ಇಲ್ಲಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಶುಕ್ರವಾರ 75 ಸಾರಿಗೆ ಬಸ್ಗಳು ಕಾರ್ಯಾಚರಣೆ ನಡೆಸಿದವು.
ಚಿತ್ರದುರ್ಗ, ಶಿವಮೊಗ್ಗ, ರಾಣೆಬೆನ್ನೂರು, ಹರಪನಹಳ್ಳಿ, ಹೊಸಪೇಟೆ, ಹುಬ್ಬಳ್ಳಿ, ಬೆಂಗಳೂರು ಮಾರ್ಗದಲ್ಲಿ ಕೆಎಸ್ಆರ್ಟಿಸಿಯ ಹೆಚ್ಚಿನ ಬಸ್ಗಳು ಸಂಚರಿಸಿದವು. 100 ಸಿಬ್ಬಂದಿ ಸೇವೆಗೆ ಹಾಜರಾಗಿದ್ದು, ಅಧಿಕಾರಿಗಳು ಕೊಂಚ ನಿಟ್ಟುಸಿರುಬಿಟ್ಟಿದ್ದಾರೆ.
ಖಾಸಗಿ ಬಸ್ಗಳೂ ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸಿದವು.
‘ಶನಿವಾರವೂಹೆಚ್ಚಿನ ಬಸ್ಗಳು ಸಂಚರಿಸುವ ನಿರೀಕ್ಷೆ ಇದೆ. ಸಿಬ್ಬಂದಿ ಕೆಲಸಕ್ಕೆ ಹಾಜರಾಗುತ್ತಿರುವುದು ಸಮಾಧಾನ ತಂದಿದೆ. ಪ್ರಮುಖ ಮಾರ್ಗಗಳ ಬಸ್ ಸಂಖ್ಯೆಯಲ್ಲಿ ಹೆಚ್ಚಳ ಮಾಡಲಾಗಿದೆ. ಸಿಬ್ಬಂದಿ ಹಿಂಜರಿಕೆ, ಭಯ ಇಲ್ಲದೆ ಕೆಲಸಕ್ಕೆ ಹಾಜರಾಗಬಹುದು’ ಎಂದುಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ್ಎನ್. ಹೆಬ್ಬಾಳ್ ಮನವಿ ಮಾಡಿದ್ದಾರೆ.
‘6ನೇ ವೇತನ ಆಯೋಗ ಜಾರಿ ಮಾಡಿ’
ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಜಿಲ್ಲಾ ಘಟಕದಿಂದ ಶುಕ್ರವಾರ ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿದ ನೌಕರರು ಬೇಡಿಕೆ ಈಡೇರಿಕೆ ಸಂಬಂಧ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಶಾಮನೂರು ಶಿವಶಂಕರಪ್ಪ ಅವರನ್ನು ಒತ್ತಾಯಿಸಿದರು. 6ನೇ ವೇತನ ಆಯೋಗವನ್ನು ಶೀಘ್ರ ಜಾರಿ ಮಾಡಬೇಕು. ಸರ್ಕಾರ ತನ್ನ ಮೊಂಡುತನವನ್ನು ಬಿಟ್ಟು ಶೀಘ್ರ ನೌಕರರ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.
ಮುಖಂಡರಾದ ಅಂಜನಪ್ಪ ಎಚ್., ಓಂಕಾರಪ್ಪ ಎಸ್., ದಾದಾಪೀರ್ ಎಲ್., ಏಳುಕೋಟಿ, ಹಾಲೇಶಪ್ಪ ಸೇರಿ ಕೂಟದ ಸದಸ್ಯರು ಇದ್ದರು.