ದಾವಣಗೆರೆ: ದಶಕಗಳಿಂದ ಇರುವರೇಲ್ವೆ ಕೆಳ ಸೇತುವೆ ಸಮಸ್ಯೆಗೆ ಶೀಘ್ರ ಶಾಶ್ವತ ಪರಿಹಾರ ಕಲ್ಪಿಸಲಾಗುವುದು ಎಂದು ಎಸ್.ಟಿ. ವೀರೇಶ್ ಹೇಳಿದರು.
ಬುಧವಾರ ರಾತ್ರಿ ಸುರಿದ ಮಳೆಗೆ ಪಾಲಿಕೆ ಎದುರಿನ ರೇಲ್ವೆ ಕೆಳ ಸೇತುವೆಯಲ್ಲಿ ನೀರು ನಿಂತಿದ್ದ ಸ್ಥಳಕ್ಕೆ ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಪಾಲಿಕೆ ಹಾಗೂ ರೈಲ್ವೆ ಇಲಾಖೆ ಎಂಜಿನಿಯರ್ಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.
‘ಪ್ರತಿ ಮಳೆಗಾಲದಲ್ಲೂ ಕೆಳ ಸೇತುವೆಯಲ್ಲಿ ಅಪಘಾತ ಸಾಮಾನ್ಯವಾಗಿದೆ. ಸಣ್ಣ ಮಳೆ ಬಂದರೂ ನೀರು ನಿಲ್ಲುತ್ತಿತ್ತು. ಮೂರ್ನಾಲ್ಕು ತಿಂಗಳ ಹಿಂದೆಯೇ ಎಂಜಿನಿಯರ್ಗಳ ಜತೆಗೆ ಚರ್ಚಿಸಿ ಈ ಬಾರಿ ಮಳೆಗಾಲ ಬರುವ ಮುಂಚೆಯೇ ಶಾಶ್ವತ ಪರಿಹಾರ ಕಂಡುಕೊಳ್ಳಲು ಸೂಚಿಸಿದ್ದೆ. ಇನ್ನು ಮುಂದೆ ನೀರು ಬಂದ ತಕ್ಷಣ ಮೋಟರ್ ನೀರು ಎತ್ತಿಹಾಕುತ್ತದೆ’ ಎಂದು ತಿಳಿಸಿದರು.
ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ‘ರೇಲ್ವೆ ಕೆಳ ಸೇತುವೆ ಸಮಸ್ಯೆ ಬಹಳ ವರ್ಷಗಳಿಂದ ಇದೆ. ಇದಕ್ಕೆ ಮೇಯರ್ ಹೇಳಿದಂತೆ ಸೆನ್ಸಾರ್ ಮೋಟರ್ ಇಟ್ಟು ನೀರನ್ನು ಹೊರ ಹಾಕಲಾಗುವುದು. ಈ ವ್ಯವಸ್ಥೆ ಯಶಸ್ವಿಯಾದರೆ ಇದೇ ಮಾದರಿಯನ್ನು ಎಲ್ಲ ಕಡೆ ಅನುಸರಿಸಲಾಗುವುದು’ ಎಂದು ತಿಳಿಸಿದರು.
ಪಾಲಿಕೆ ಕಾಂಗ್ರೆಸ್ ಸದಸ್ಯ ಚಮನ್ಸಾಬ್, ‘ಮಳೆಗಾಲದಲ್ಲಿ ಹಳೇಭಾಗಕ್ಕೆ ಬರಲು ಸಮಸ್ಯೆಯಾಗುತ್ತಿತ್ತು. ಮೇಯರ್ ಮತ್ತು ಅಧಿಕಾರಿಗಳು ಸೇರಿ ಒಂದು ಹೊಸ ಪರಿಹಾರ ಹುಡುಕಿರುವುದು ಶ್ಲಾಘನೀಯ’ ಎಂದರು.
ಪಾಲಿಕೆ ಸದಸ್ಯರಾದ ಸೋಗಿ ಶಾಂತಕುಮಾರ್, ಶಿವನಗೌಡ ಪಾಟೀಲ್, ಸಾಮಾಜಿಕ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್ ಇದ್ದರು.