ದಾವಣಗೆರೆ: ಇಲ್ಲಿನ ನಗರ ದೇವತೆ ದುರ್ಗಾಂಬಿಕಾ ದೇವಿ ದೇವಸ್ಥಾನದಲ್ಲಿ ದಸರಾ ಹಬ್ಬವನ್ನು ಸಂಪ್ರದಾಯದಂತೆ ಆಚರಿಸಲು ದೇವಸ್ಥಾನ ಟ್ರಸ್ಟ್ ನಿರ್ಧರಿಸಿದೆ.
ದೇವಸ್ಥಾನದ ಪ್ರಸಾದ ನಿಲಯದಲ್ಲಿ ಟ್ರಸ್ಟ್ ಗೌರವಾಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ದಸರಾ ಹಬ್ಬದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು.
ಸೆ.26ರಿಂದ ಅಕ್ಟೋಬರ್ 6 ತನಕ ನಡೆಯಲಿರುವ ದಸರಾ ಹಬ್ಬದ ಪ್ರಯುಕ್ತ ನಗರ ದೇವತೆ ದೇವಸ್ಥಾನದಲ್ಲಿ ಪ್ರತಿ ದಿನ ಅಮ್ಮನವರಿಗೆ ವಿಶೇಷ ಅಲಂಕಾರ, ಪೂಜೆಗಳು ನೆರವೇರಲಿವೆ. ಸಾಮೂಹಿಕ ವಿವಾಹ, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.
ಬೆಲೆ ಏರಿಕೆಗೆ ಅನುಗುಣವಾಗಿ ದಸರಾ ಆಚರಣೆ ಸಂಬಂಧ ದೇವಸ್ಥಾನದಲ್ಲಿ ನಡೆಯುವ ಪೂಜಾ ಸೇವೆಗಳ ದರಗಳನ್ನು ಏರಿಸಬೇಕಾಗಿದೆ. ಪಂಚಾಮೃತ ಅಭಿಷೇಕಕ್ಕೆ ₹ 200, ಕುಂಬಾಭಿಷೇಕಕ್ಕೆ ₹ 100, ಕಳಸದ ಪೂಜೆಗೆ ₹ 50, ವಿಶೇಷ ದರ್ಶನಕ್ಕೆ ₹ 310 ದರ ನಿಗದಿಪಡಿಸಲಾಯಿತು.
ನಗರ ದೇವತೆ ದುರ್ಗಾಂಬಿಕ ದೇವಸ್ಥಾನ ಟ್ರಸ್ಟ್ ನಿಂದ ನಿರ್ಮಿಸಿದ 32 ಮಳಿಗೆಗಳ ಕಟ್ಟಡದ ಗುಣಮಟ್ಟ ಕಳಪೆಯಾಗಿರುವ ಬಗ್ಗೆ ಇನ್ನೂ ಕ್ರಮ ವಹಿಸಿಲ್ಲ. ₹ 50 ಲಕ್ಷ ಹೊರೆಯಾಗಿದೆ ಎಂದು ಯಶವಂತ್ ರಾವ್ ಜಾಧವ್ ಆರೋಪಿಸಿದರು.
ಸುದೀರ್ಘ ಚರ್ಚೆಯ ನಂತರ ಅಧಿವೇಶನ ಮುಗಿದ ಬಳಿಕ ಈ ಸಂಬಂಧ ಮತ್ತೊಮ್ಮೆ ಮೂವರು ಎಂಜಿನಿಯರ್ಗಳ ವರದಿ ಪರಿಶೀಲಿಸಿ, ಚರ್ಚಿಸಿ ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು.
ಸಭೆಯಲ್ಲಿ ಟ್ರಸ್ಟ್ ನ ಖಜಾಂಚಿ ಅಥಣಿ ವೀರಣ್ಣ, ಸದಸ್ಯರಾದ ಯಜಮಾನ್ ಮೋತಿ ವೀರಣ್ಣ, ಎಚ್.ಬಿ. ಗೋಣೆಪ್ಪ, ಬಿ.ಎಚ್. ವೀರಭದ್ರಪ್ಪ, ಜೋಗಪ್ಪನವರ ಕೊಟ್ರಬಸಪ್ಪ, ಸಾಳಂಕಿ ಉಮೇಶ್ ಸೇರಿದಂತೆ ಇತರರು ಇದ್ದರು. ಧರ್ಮದರ್ಶಿ ಗೌಡ್ರ ಚೆನ್ನಬಸಪ್ಪ ಅವರು ಸಭಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.