ದಾವಣಗೆರೆ: ಕಪ್ಪು ಶಿಲೀಂಧ್ರ ಅಂದರೆ ರೋಗವಲ್ಲ, ರೋಗಾಣು. ರೋಗ ನಿರೋಧಕ ಶಕ್ತಿ ಕಡಿಮೆಯಾದವರಿಗೆ ಅದು ದಾಳಿ ಮಾಡುತ್ತದೆ.
ಇದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗರಾಜ್ ನೀಡಿದ ವಿವರಣೆ.
ಮಧುಮೇಹ ಇದ್ದವರನ್ನು ಕಾಡುತ್ತದೆ. ಸ್ಟಿರಾಯ್ಡ್ ಅಧಿಕ ಬಳಕೆ ಮಾಡುವವರಿಗೂ ಬರುತ್ತದೆ. ಬಹಳ ಮಂದಿ ಕ್ರೀಡಾಪಟುಗಳು, ಸಿನಿಮಾ ನಟರು ಸ್ಟಿರಾಯ್ಡ್ ಅಧಿಕ ಬಳಸಿ ತೊಂದರೆಗೆ ಒಳಗಾಗುವುದು ಇದೇ ಕಾರಣದಿಂದ. ಕ್ಯಾನ್ಸರ್, ಮೂತ್ರಪಿಂಡದಂತ ಗಂಭೀರ ಸಮಸ್ಯೆಯಿಂದ ಬಳಲಿ ರೋಗ ನಿರೋಧಕ ಶಕ್ತಿ ಕಡಿಮೆ ಆದರೆ ಆಗ ಈ ಫಂಗಸ್ ಪರಿಣಾಮ ಬೀರುತ್ತದೆ. ಐಸಿಯು, ವೆಂಟಿಲೇಟರ್ಗಳಲ್ಲಿ ದೀರ್ಘ ಸಮಯದ ಚಿಕಿತ್ಸೆ ಪಡೆಯುವವರಿಗೂ ಇದು ಕಾಡುತ್ತದೆ. ಹುಟ್ಟಿನಿಂದಲೇ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ (ಇಮ್ಯುನೊಕಾಂ ಪ್ರಮೈಸ್) ಇದು ಕಂಡು ಬರುತ್ತದೆ ಎಂದು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಬೇರೆ→ಕಾಯಿಲೆಗಳಿದ್ದು,→ಕೊರೊನಾ ಬಂದರೆ ಕೊರೊನಾ ವೈರಸ್ ಹೆಚ್ಚು ಅಂಗಾಂಗ ಗಳಿಗೆ ತೊಂದರೆ ನೀಡಬಾರದು ಎಂಬ ಕಾರಣಕ್ಕೆ ಸ್ಟಿರಾಯ್ಡ್ ನೀಡಲಾಗುತ್ತದೆ. ಆಗ ದೇಹದಲ್ಲಿ ಸಕ್ಕರೆ ಅಂಶ ಜಾಸ್ತಿಯಾಗುತ್ತದೆ. ಇದು ಈಗ ಸಿಲೀಂಧ್ರ ಉಂಟು ಮಾಡುತ್ತಿರುವ ಸಮಸ್ಯೆಗೆ ಕಾರಣ ಎಂದು ಹೇಳಿದರು.
ಮ್ಯೂಕರ್ ಮೈಕೊಸಿಸ್ ಎಂದು ಇದನ್ನು ಕರೆಯುತ್ತೇವೆ. ಮೈಕೊಸಿಸ್ ಎಂದರೆ ಫಂಗಸ್. ಗೋಡೆ, ಗಿಡ–ಮರ, ನೀರು ಹೀಗೆ ಹೊರಗೆ ಶಿಲೀಂಧ್ರಗಳು ಇರುತ್ತವೆ. ಅದರ ಸಂಪರ್ಕದಿಂದ ಮನುಷ್ಯನಿಗೆ ಬರುತ್ತದೆ. ಕೆಲವು ಚರ್ಮದ ಮೇಲೆ ಕೆರೆತ, ಬಿಳಿ ಮಚ್ಚೆ ಇನ್ನಿತರ ಪರಿಣಾಮಗಳನ್ನು ಉಂಟು ಮಾಡುತ್ತದೆ. ಇದ ಲ್ಲದೇ ಕೆಲವು ಜಠರ, ಕಣ್ಣು ಸಹಿತ ದೇಹದ ಒಳಗಡೆ ಪರಿಣಾಮವನ್ನುಂಟು ಮಾಡು ತ್ತದೆ. ಈ ಕಪ್ಪು ಶಿಲೀಂಧ್ರ ಒಳಗೆ ಪರಿಣಾಮ ಉಂಟು ಮಾಡುವಂಥದ್ದು ಎಂದು ಸರ್ವೇಕ್ಷಣಾಧಿಕಾರಿ ಡಾ. ಜಿ.ಡಿ. ರಾಘವನ್ ವಿವರಿಸಿದರು.
ತಲೆ ಬುರುಡೆಯಲ್ಲಿ ಸಣ್ಣ ಸಣ್ಣ ತೂತುಗಳಿರುತ್ತವೆ. ಇವುಗಳನ್ನು ಸೈನೊಸಿಸ್ ಎಂದು ಕರೆಯುತ್ತೇವೆ. ಹಣೆ, ಕಣ್ಣಿನ ಕೆಳಗೆ, ದವಡೆ ಮೇಲೆ, ಕೆಳಗೆ ಹೀಗೆ ನಾಲ್ಕು ರೀತಿಯಲ್ಲಿ ಸಣ್ಣ ಸಣ್ಣ ರಂಧ್ರಗಳಿರುತ್ತವೆ. ಇವುಗಳ ಮೂಲಕ ಶಿಲೀಂಧ್ರ ಪ್ರವೇಶಿಸುತ್ತದೆ ಎಂದು ತಿಳಿಸಿದರು.
ಬಾಯಿ, ಶ್ವಾಸ ಕೋಶದಿಂದ ಮೂಗಿನ ರಂಧ್ರಗಳ ಮೂಲಕ ಮೆದುಳಿಗೆ ಹೋಗುತ್ತದೆ. ಕೊರೊನಾ ಇರುವ ರೋಗಿಗೆ ಮೂಗು, ಬಾಯಿ, ಕಣ್ಣು, ಮುಖದ ಮಾಂಸ ಖಂಡಗಳು ದಪ್ಪ ಆದರೆ, ನಾಲಗೆ, ಬಾಯಿಯ ಒಳಭಾಗ ಕಪ್ಪು ಅಥವಾ ನೇರಳೆ ಬಣ್ಣಕ್ಕೆ ತಿರುಗಿದರೆ ಅದು ಕಪ್ಪು ಶಿಲೀಂಧ್ರದ ದಾಳಿಯೇ ಎಂದು ಪರೀಕ್ಷೆ ಮಾಡಿಸಬೇಕಾಗುತ್ತದೆ ಎಂದು ವಿವರ ನೀಡಿದರು.
‘ಮೆದುಳಿನ ಎಲ್ಲ ಭಾಗಕ್ಕೆ ಹರಡಿದರೆ ತೊಂದರೆಯಾಗುತ್ತದೆ. ಮೊದಲ ಹಂತದಲ್ಲಿಯೇ ಆ್ಯಂಟಿ ಫಂಗಲ್ ಡ್ರಗ್ಸ್ ತಕ್ಷಣ ನೀಡಲು ಸಾಧ್ಯವಾದರೆ ಗುಣಮುಖರಾಗುತ್ತಾರೆ. ಎಷ್ಟು ಬೇಗ ಚಿಕಿತ್ಸೆ ಒಳಪಡಿಸುತ್ತೇವೆ ಯೋ ಅಷ್ಟೂ ಒಳ್ಳೆಯದು. ಈ ಫಂಗಸ್ ಒಬ್ಬರಿಂದ ಒಬ್ಬರಿಗೆ ಹರಡುವುದಿಲ್ಲ’ ಎಂದು ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯಾಧಿಕಾರಿ ಡಾ.ಕೆ.ಎಸ್. ಮೀನಾಕ್ಷಿ ಮಾಹಿತಿ ನೀಡಿದರು.
ಕಪ್ಪು ಶಿಲೀಂಧ್ರ ಪ್ರಕರಣಗಳ ಸಂಖ್ಯೆ ಹೆಚ್ಚು ಇರುವುದಿಲ್ಲ. ನಾಲ್ಕೈದು ಜಿಲ್ಲೆಗಳಿಗೆ ಒಂದು ಕಡೆ ಚಿಕಿತ್ಸೆ ಸಾಕಾಗುತ್ತದೆ. ಗುರುವಾರದಿಂದ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯಲಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.