ಕಡರನಾಯ್ಕನಹಳ್ಳಿ: ಕೊಕ್ಕನೂರು ಗ್ರಾಮದ ಆಂಜನೇಯ ಸ್ವಾಮಿ ಕಾರ್ತಿಕೋತ್ಸವ ವಿಜೃಂಭಣೆಯಿಂದ ನಡೆಯಿತು. ಸಾವಿರಾರು ಭಕ್ತರು ಕಾರ್ತಿಕೋತ್ಸವದಲ್ಲಿ ಭಾಗಿಯಾಗಿದ್ದರು.
ಸಮೀಪದ ಕೊಕ್ಕನೂರು ಆಂಜನೇಯ ಸ್ವಾಮಿ ಕಾರ್ತಿಕೋತ್ಸವ ಅಂಗವಾಗಿ ಶನಿವಾರ ಬೆಳಿಗ್ಗೆ 6 ಗಂಟೆಗೆ ಫಲ ಪಂಚಾಮೃತಾಭಿಷೇಕ ನಡೆಯಿತು. ನಂತರ ಸ್ವರ್ಣಾಲಂಕಾರ ಮಾಡಲಾಯಿತು. ನಾನಾ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು.
ಸಂಜೆ 6 ಗಂಟೆಯಿಂದ ಸಾವಿರಾರು ಭಕ್ತರು ದೀಪ ಹಚ್ಚಿ ಸಂತಾನ ಫಲ, ಆರೋಗ್ಯ ನೀಡುವಂತೆ, ಕಷ್ಟ ಕಾರ್ಪಣ್ಯಗಳನ್ನ ದೂರ ಮಾಡುವಂತೆ ಪ್ರಾರ್ಥನೆ ಮಾಡಿದರು. ನಂತರ ಸ್ವಾಮಿಯ ಪ್ರಸಾದ ಸ್ವೀಕರಿಸಿದರು.
ರಾತ್ರಿ ಹನ್ನೊಂದು ಗಂಟೆಗೆ ಗ್ರಾಮದ ಎಲ್ಲ ದೇವರುಗಳ ಕಾರ್ತಿಕಕ್ಕೆ ಆಂಜನೇಯ ಸ್ವಾಮಿ ಉತ್ಸವ ಮೂರ್ತಿಯನ್ನು ಸರ್ವಾಲಂಕಾರ ಪಲ್ಲಕ್ಕಿರೋಹಣ ಮಾಡಲಾಯಿತು. ಬಾಜ ಭಜಂತ್ರಿ, ಡೊಳ್ಳು ಕುಣಿತದೊಂದಿಗೆ ಗ್ರಾಮದ ಎಲ್ಲ ದೇವರುಗಳಿಗೆ ಕಾರ್ತಿಕೋತ್ಸವ ನಡೆಯಿತು.