ದಾವಣಗೆರೆ: ಕಾಂಗ್ರೆಸ್ ಮುಖಂಡ ಡಾ. ವೈ. ರಾಮಪ್ಪ ಅವರು ಜಾತಿ ನಿಂದನೆ ಪ್ರಕರಣವನ್ನು ವೈಯಕ್ತಿಕ ಹಿತಾಸಕ್ತಿಗಾಗಿ ಬಳಸಿಕೊಂಡಿದ್ದು, ಕೂಡಲೇ ವಾಪಸ್ ಪಡೆದುಕೊಳ್ಳಬೇಕು ಎಂದು ಮಾಜಿ ಶಾಸಕ ಬಸವರಾಜ್ ನಾಯ್ಕ ಆಗ್ರಹಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಖಂಡರಾಗಿರುವರು ಜಾತಿ ನಿಂದನೆ ಪ್ರಕರಣವನ್ನು ದುರ್ಬಳಕೆ ಮಾಡಿಕೊಳ್ಳಬಾರದು. ಏ. 23ರಂದು ರಾಮಪ್ಪ ಲಿಂಗಾಯತ ಸಮುದಾಯದವರ ಮನಸ್ಸಿಗೆ ನೋವುಂಟು ಮಾಡುವಂತೆ ಮಾತನಾಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿ ಪ್ರತಿಭಟಿಸಿದ 15 ಜನರ ವಿರುದ್ಧ ಜಾತಿ ನಿಂದನೆ ಪ್ರಕರಣವನ್ನು ಶುಕ್ರವಾರ ಬಡಾವಣೆ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಲಿಂಗಾಯತ ಸಮುದಾಯ ಶಿಕ್ಷಣ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದೆ. ಇಂದು ನಾವು ಉನ್ನತ ಸ್ಥಾನದಲ್ಲಿರಲು ಅಂದು ಮಠಗಳು ನೀಡಿದ ಶಿಕ್ಷಣ ಕಾರಣ. ಸಾಮಾಜದ ಸಾಮರಸ್ಯ ಕಾಪಾಡಬೇಕಾದ ರಾಜಕಾರಣಿಗಳೇ ಹೀಗೆ ಸಮುದಾಯಗಳ ಮಧ್ಯೆ ವೈಮನಸ್ಸು ಉಂಟುಮಾಡಬಾದರು’ ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಹನುಮಂತ ನಾಯ್ಕ, ಶಿವಮೂರ್ತಿ, ಮಹಾಬಲೇಶ್, ತಿಪ್ಪೇಸ್ವಾಮಿ, ಮಂಜಣ್ಣ, ಆಲೂರು ಚನ್ನಬಸಪ್ಪ, ಮಲ್ಲಕಟ್ಟೆ ನಾಗರಾಜ್ ಅವರೂ ಇದ್ದರು.
‘ಕಾಂಗ್ರೆಸ್ಗೆ ಅಹಿಂದ ಭೋಗ್ಯಕ್ಕೆ ನೀಡಿಲ್ಲ’
‘ಅಹಿಂದ ಸಮಾಜವನ್ನು ಕಾಂಗ್ರೆಸ್ಗೆ ಭೋಗ್ಯಕ್ಕೆ ನೀಡಿಲ್ಲ. ಜಾತಿಗಳ ನಡುವೆ ವಿಷಬೀಜ ಬಿತ್ತುವ ಕೆಲಸವನ್ನು ರಾಮಪ್ಪ ಮಾಡಿದ್ದಾರೆ. ಎಲ್ಲಾ ಪಕ್ಷಗಳಲ್ಲೂ ಎಲ್ಲಾ ವರ್ಗದವರಿದ್ದಾರೆ. ಜಾತಿ ನಿಂದನೆ ಪ್ರಕರಣವನ್ನು ದುರ್ಬಳಕೆ ಮಾಡಿಕೊಂಡರೆ ಅಹಿಂದ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತದೆ’ ಎಂದು ಬಿಜೆಪಿ ಮುಖಂಡ ಅಣಬೇರು ಶಿವಮೂರ್ತಿ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.