ದಾವಣಗೆರೆ: ನಗರದಲ್ಲಿ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಎಚ್ಚರ ವಹಿಸಿ ಎಂದು ಪಾಲಿಕೆಯ ಆಡಳಿತಾಧಿಕಾರಿ, ಪ್ರಾದೇಶಿಕ ಆಯುಕ್ತೆ ವಿ.ರಶ್ಮಿ ತಿಳಿಸಿದರು.
ಪಾಲಿಕೆ ವ್ಯಾಪ್ತಿಯ ವಿವಿಧ ಕಾಮಗಾರಿಗಳನ್ನು ವೀಕ್ಷಿಸಿದ ಬಳಿಕ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.
ಕಂದಾಯ ತೆರಿಗೆ, ನೀರಿನ ಕರ ವಸೂಲಾತಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಬೇಕು. ಕಾಮಗಾರಿಗಳ ಗುಣಮಟ್ಟ ಕಾಯ್ದುಕೊಳ್ಳಬೇಕು. ಯಾವುದೇ ರೀತಿಯಲ್ಲಿ ಕಳಪೆಯಾಗದಂತೆ ನೋಡಿಕೊಳ್ಳಬೇಕು. ಅಗತ್ಯ ಇರುವಲ್ಲಿಗೆ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದು ನಿರ್ದೇಶನ ನೀಡಿದರು.
ಎಸ್ಎಫ್ಸಿ, ಮುನ್ಸಿಪಲ್ ನಿಧಿ, 14ನೇ ಹಣಕಾಸು, ಅಮೃತ್ ಯೋಜನೆ, ಶೇ 24.10 ನಿಧಿ, ಶೇ 7.25 ನಿಧಿ, ಅಂಗವಿಕಲರ ಶೇ 5 ನಿಧಿಗಳಿಗೆ ಸಂಬಂಧಿಸಿದಂತೆ 2019–20ನೇ ಸಾಲಿನ ಕ್ರಿಯಾಯೋಜನೆಗಳಿಗೆ ಅನುಮೋದನೆ ನೀಡಿದರು.
ತುಂಗಭದ್ರಾ ನದಿಗೆ ನೀರು ಹರಿಸುವಂತೆ ಜಿಲ್ಲಾಧಿಕಾರಿ ಮೂಲಕ ಪಾಲಿಕೆ ಆಯುಕ್ತರು ಮಾಡಿದ ಮನವಿಗೆ ಸ್ಪಂದಿಸಿ ಮೂರೇ ದಿನದಲ್ಲಿ ನೀರು ಹರಿಸಲು ಆದೇಶ ನೀಡಿರುವುದಾಗಿ ತಿಳಿಸಿದ ಪ್ರಾದೇಶಿಕ ಆಯುಕ್ತರು ರಾಜನಹಳ್ಳಿಯಲ್ಲಿ ತುಂಗಭದ್ರಾ ನದಿಯಲ್ಲಿರುವ ಜಾಕ್ವೆಲ್ ವೀಕ್ಷಣೆ ಮಾಡಿದರು.
ಪಾಲಿಕೆ ಆಯುಕ್ತ ವೀರೇಂದ್ರ ಕುಂದಗೋಳ, ಉಪ ಆಯುಕ್ತ (ಅಭಿವೃದ್ಧಿ) ಎಸ್.ಸಿ. ಸತೀಶ್, ಕಾರ್ಯಪಾಲಕ ಎಂಜಿನಿಯರ್ ಆರ್.ಪಿ. ಜಾಧವ್, ವಿದ್ಯುತ್ ವಿಭಾಗ ಕಾರ್ಯಪಾಲಕ ಎಂಜಿನಿಯರ್ ಕರಿಯಪ್ಪ, ಎಲ್ಲ ಸಹಾಯಕ ಎಂಜಿನಿಯರ್ಗಳು, ಕಂದಾಯ ಅಧಿಕಾರಿಗಳು, ಪರಿಷತ್ ಕಾರ್ಯದರ್ಶಿ, ಶಾಖಾ ಮುಖ್ಯಸ್ಥರು ಇದ್ದರು.