ಹರಿಹರ: ಬಾಬರಿ ಮಸೀದಿ ಪುನರ್ ನಿರ್ಮಿಸಬೇಕು. ಮಸೀದಿ ಧ್ವಂಸಗೊಳಿಸಿ ಆರೋಪಿಗಳನ್ನು ಶಿಕ್ಷಿಸಬೇಕು ಮತ್ತು ಲಿಬ್ರಹಾನ್ ವರದಿಯ ಶಿಫಾರಸುಗಳನ್ನು ಜಾರಿಗೊಳಿಸಲು ಆಗ್ರಹಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ಗುರುವಾರ ನಗರದ ಮಿನಿ ವಿಧಾನಸೌಧ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಗ್ರೇಡ್-2 ವೆಂಕಟಮ್ಮ ಅವರಿಗೆ ಮನವಿ ಸಲ್ಲಿಸಿದರು.
ಪಿಎಫ್ಐ ಜಿಲ್ಲಾ ಘಟಕದ ಅಧ್ಯಕ್ಷ ಫಯಾಜ್ ಅಹ್ಮದ್, ‘ಕೋಮುವಾದಿಗಳು ಮುಸ್ಲಿಮರ ಪ್ರಾರ್ಥನಾ ಮಂದಿರವಾದ ಬಾಬರಿ ಮಸೀದಿಯನ್ನು ಧ್ವಂಸಗೊಳಿಸುವ ಮೂಲಕ ದೇಶದ ಭಾವೈಕ್ಯ ಹಾಗೂ ಸಾಮರಸ್ಯವನ್ನು ಛಿಧ್ರಗೊಳಿಸಿದ್ದು ದೇಶದ ದೊಡ್ಡ ದುರಂತ’ ಎಂದು ದೂರಿದರು.
ಈ ಘಟನೆ ನಡೆದು ಇಷ್ಟು ವರ್ಷಗಳಾದರೂ ಸರ್ಕಾರ ನೀಡಿದ್ದ ಮಸೀದಿ ಪುನರ್ ನಿರ್ಮಾಣದ ಭರವಸೆ ಈಡೇರಿಲ್ಲ. ಪುನರ್ ನಿರ್ಮಾಣ ಮತ್ತು ಅಪರಾಧಿಗಳನ್ನು ಶಿಕ್ಷಿಸುವ ಮೂಲಕ ಗಣರಾಜ್ಯದ ಬಗ್ಗೆ ಜನರ ನಂಬಿಕೆಯನ್ನು ಪುನಃ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಮಸೀದಿ ಮತ್ತು ಆವರಣದ ಮಾಲಿಕತ್ವದ ಸಂಬಂಧಿಸಿದಂತೆ ದಾಖಲಿಸಲಾದ ಪ್ರಕರಣಗಳು ಇಂದಿಗೂ ಇತ್ಯರ್ಥವಾಗಿಲ್ಲ. ಸುಪ್ರೀಂ ಕೋರ್ಟ್ ಪ್ರಕರಣವನ್ನು ಶೀಘ್ರ ಇತ್ಯರ್ಥಗೊಳಿಸಬೇಕು ಎಂದು ಒತ್ತಾಯಿಸಿದರು.