ಹರಪನಹಳ್ಳಿ: ಬೇಡ ಜಂಗಮರ ಸಾಂವಿಧಾನಿಕ ಹಕ್ಕುಗಳನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಫೆ.24 ಹಾಗೂ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಅಖಿಲ ಕರ್ನಾಟಕ ಬೇಡಜಂಗಮ ಸಮಾಜ ಸಂಘಟನೆ ಬೃಹತ್ ಹೋರಾಟ ನಡೆಸಲಿದೆ ಎಂದು ಅಖಿಲ ಕರ್ನಾಟಕ ಬೇಡ ಜಂಗಮ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ವೀರೇಂದ್ರ ಪಾಟೀಲ್ ಹೇಳಿದರು.
ಪಟ್ಟಣದ ತೆಗ್ಗಿನಮಠದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಿವಸ ನಡೆಯುವ ಈ ಬೃಹತ್ ಪ್ರತಿಭಟನೆಯ ನೇತೃತ್ವವನ್ನು ರಾಷ್ಟ್ರೀಯ ಅಧ್ಯಕ್ಷ ಕೋಳದಮಠದ ಶಾಂತವೀರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಜಾತಿ ಪ್ರಮಾಣ ಪತ್ರ ವಿತರಣೆ ಮಾಡಬೇಕು, ಪ್ರತ್ಯೇಕವಾಗಿ ಬೇಡಜಂಗಮ ನಿಗಮ ಅಭಿವೃದ್ಧಿ ಮಂಡಳಿ ರಚಿಸಬೇಕು, ರೇಣುಕಾಚಾರ್ಯರರ ಜಯಂತಿಯನ್ನು ಯುಗಾದಿಯಂದು ಸರ್ಕಾರಿ ರಜೆ ರಹಿತವಾಗಿ ಆಚರಿಸಬೇಕು ಎಂಬ ಪ್ರಮುಖ ಬೇಡಿಕೆಗಳ ಮನವಿಯನ್ನು ಇದೇ ಸಂದರ್ಭ ಸಲ್ಲಿಸಲಾಗುವುದು’ ಎಂದರು.
‘ಹೋರಾಟದಲ್ಲಿ ರಾಜ್ಯದ ವಿವಿಧ ಜಿಲ್ಲೆ, ತಾಲ್ಲೂಕುಗಳಿಂದ ಲಕ್ಷಾಂತರ ಬೇಡಜಂಗಮರು ಪಾಲ್ಗೊಳ್ಳುವರು. ತಾಲ್ಲೂಕಿನಿಂದಲೂ 2 ಸಾವಿರ ಜಂಗಮರು ಭಾಗವಹಿಸಲಿದ್ದಾರೆ’ ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಎಂ.ಎಂ.ಜೆ.ಸ್ವರೂಪನಂದ, ಟಿ.ಎಚ್.ಎಂ. ಮಲ್ಲಿಕಾರ್ಜುನ, ತಾಲ್ಲೂಕು ಅಧ್ಯಕ್ಷ ಗಂಗಾಧರ ಗುರುಮಠ, ಕಾರ್ಯದ್ಯಕ್ಷ ಎಚ್.ಎಂ .ಜಗದೀಶ, ಟಿ.ಎಂ. ಚಂದ್ರಶೇಖರಯ್ಯ, ಎ.ಎಂ. ಮಲ್ಲಿಕಾರ್ಜುನಸ್ವಾಮಿ, ಎಸ್.ಎಂ. ರುದ್ರುಮುನಿ, ರವಿಶಂಕರ, ಚಂದ್ರಶೇಖರ ಇದ್ದರು.