ದಾವಣಗೆರೆ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದವರಿಗೆ ಪಕ್ಷದಿಂದ ಉಚ್ಛಾಟಿಸಿದ ಬಿಜೆಪಿ ಅಭ್ಯರ್ಥಿಗಳಿಗೆ ಎಚ್ಚರಿಕೆ ರವಾನಿಸಿದೆ.
ಬಂಡಾಯ ಅಭ್ಯರ್ಥಿಗಳಲ್ಲದೆ ಅವರನ್ನು ಬೆಂಬಲಿಸಿದ ಪಕ್ಷದ ಪದಾಧಿಕಾರಿಗಳು ಸೇರಿ 9 ಜನರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಅವಧಿಗೆ ಉಚ್ಛಾಟಿಸಲಾಗಿದೆ.
ವಾರ್ಡ್ 15 ರಲ್ಲಿ ಸ್ಪರ್ಧಿಸಿದ್ದ ಬಂಡಾಯ ಅಭ್ಯರ್ಥಿ ಶಶಿಕಲಾ ಪರಸನಗೌಡ, 24 ರಲ್ಲಿ ಸ್ಪರ್ಧಿಸಿದ್ದ ಅಥಿತ್ರಾವ್ ಅಂಬರಕರ್, 32ರ ಉಮಾ ಪ್ರಕಾಶ್, 33ರ ಎನ್. ರಾಜಶೇಖರ್, 42ರ ಪ್ರೀತಿ ರವಿಕುಮಾರ್, 44ರಲ್ಲಿ ಸ್ಪರ್ಧಿಸಿದ್ದ ಪದ್ಮಾವತಿ ಮಂಜುನಾಥ್ ಅವರನ್ನು ಉಚ್ಛಾಟಿಸಲಾಗಿದೆ.
ಅಲ್ಲದೇ ಬಂಡಾಯ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸಿ, ಅವರ ಪರ ಕೆಲಸ ಮಾಡಿದ್ದ ಮುಖಂಡ ಪರಸನಗೌಡ, ಜಿಲ್ಲಾ ಕಾರ್ಯದರ್ಶಿ ಎ.ವೈ. ಪ್ರಕಾಶ್, ಕಾರ್ಯದರ್ಶಿ ಮಂಜುನಾಥ್ (ನಲ್ಲಿ ಮಂಜಣ್ಣ) ಅವರನ್ನು ಉಚ್ಛಾಟಿಸಲಾಗಿದೆ.
ಚುನಾವಣೆಯಲ್ಲಿ ಪಕ್ಷದ ಸೂಚನೆಯನ್ನು ಧಿಕ್ಕರಿಸಿದ ಬಂಡಾಯ ಅಭ್ಯರ್ಥಿಗಳ ಪರ ಕೆಲಸ ಮಾಡಿದ ಹಾಗೂ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಕೆಲಸ ಮಾಡದೆ ಶಿಸ್ತು ಉಲ್ಲಂಘಿಸಿದ ಕಾರಣ ಅವರನ್ನು ಉಚ್ಛಾಟಿಸಲಾಗಿದೆ ಎಂದು ಪಕ್ಷದ ರಾಜ್ಯ ಮಾಧ್ಯಮ ಸಹ ಸಂಚಾಲಕ ಬಿ.ಎನ್. ರಾಘವೇಂದ್ರ ತಿಳಿಸಿದ್ದಾರೆ.