ಹೊನ್ನಾಳಿ: ‘ಬಿಜೆಪಿ ಅಪ್ಪಟ ದೇಶಭಕ್ತರ ಪಕ್ಷ. ನಮ್ಮ ಯಾವುದೇ ಸಭೆ ಸಮಾರಂಭಗಳಲ್ಲಿ ಭಾರತ ಮಾತೆಗೆ ಪೂಜಿಸಿ, ಜೈಕಾರ ಹಾಕುತ್ತೇವೆ. ಆದರೆ, ಕಾಂಗ್ರೆಸ್ ಸೇರಿ ಇತರೆ ರಾಜಕೀಯ ಪಕ್ಷಗಳ ಮುಖಂಡರು ವ್ಯಕ್ತಿಗಳ ಆರಾಧನೆಯಲ್ಲಿ ತೊಡಗಿದ್ದಾರೆ. ಬಿಜೆಪಿ ಬೇರೆ ಪಕ್ಷಗಳಿಗಿಂತ ಭಿನ್ನ’ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ತಾಲ್ಲೂಕಿನ ಕೂಲಂಬಿ ಗ್ರಾಮದ ಗದ್ದಿಗೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹೊನ್ನಾಳಿ ಮಂಡಲದ ಬಿಜೆಪಿ ಕಾರ್ಯಕಾರಿಣಿ ಉದ್ಘಾಟಿಸಿ ಅವರು ಮಾತನಾಡಿದರು.
‘ಕಾಂಗ್ರೆಸ್ ಪಕ್ಷದವರು ಇಂದಿರಾಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಸೇರಿ ಇತರೆ ಎಲ್ಲರಿಗೂ ಜೈಕಾರ ಹಾಕುತ್ತಾರೆ. ಅವರಿಗೆ ದೇಶಪ್ರೇಮದ ಗಂಧ, ಗಾಳಿಯೂ ಇಲ್ಲ. ದೇಶದ ಪ್ರಜೆಗಳ ಚಿಂತೆಯೂ ಅವರಿಗಿಲ್ಲ’ ಎಂದರು.
‘ನಾವು ಹಿಂದುತ್ವದ ಅಡಿಯಲ್ಲಿ ಪಕ್ಷ ಸಂಘಟನೆ ಮಾಡುತ್ತೇವೆಯೇ ಹೊರತು ಬೇರೆಯವರಂತೆ ಚುನಾವಣೆ, ರಾಜಕೀಯ ಸ್ಥಾನ-ಮಾನಗಳಿಗೋಸ್ಕರ ಪಕ್ಷ ಸಂಘಟನೆ ಮಾಡುವುದಿಲ್ಲ. ನಮ್ಮಲ್ಲಿ ಸಾಮಾನ್ಯ ಕಾರ್ಯಕರ್ತನಿಗೂ ಬೆಲೆ ಇದೆ. ಸಂಘಟನೆಯಿಂದ ಬಂದವರಿಗೆ ನಮ್ಮಲ್ಲಿ ಉನ್ನತ ಸ್ಥಾನ ನೀಡಲು ಆದ್ಯತೆ ನೀಡಲಾಗುತ್ತದೆ. ಕಾಂಗ್ರೆಸ್ ಪಕ್ಷದವರು ಅಧಿಕಾರಕ್ಕಾಗಿ ಹಪಹಪಿಸುತ್ತಾರೆ. ವಾಮಮಾರ್ಗದಲ್ಲಿ ಅಧಿಕಾರ ಹಿಡಿಯುವುದರಲ್ಲಿ ಅವರು ನಿಸ್ಸೀಮರು’ ಎಂದರು.
‘ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಕೊರೊನಾ ಸಂದರ್ಭದಲ್ಲಿ ವಿಶಿಷ್ಟವಾಗಿ ಕೆಲಸ ಮಾಡುವ ಮೂಲಕ ಮಾದರಿಯಾಗಿದ್ದಾರೆ. ಆದರೆ, ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಮತ್ತು ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಚ್.ಬಿ. ಮಂಜಪ್ಪ ಅವರು ಅನಗತ್ಯವಾಗಿ ರೇಣುಕಾಚಾರ್ಯ ಅವರನ್ನು ಟೀಕಿಸುತ್ತಾರೆ. ಮಂಜಪ್ಪ ಅವರು ಒಂದೇ ಒಂದು ಹಳ್ಳಿಗೂ ತೆರಳಿ ಕೊರೊನಾ ಸೋಂಕಿತರ ಆರೋಗ್ಯ ವಿಚಾರಿಸಿಲ್ಲ. ಇವರಿಗೆ ನಮ್ಮ ನಾಯಕರನ್ನು ಟೀಕಿಸುವ ನೈತಿಕತೆ ಇಲ್ಲ’ ಎಂದುಜಿಲ್ಲಾ ಕಾರ್ಯದರ್ಶಿ ಶಾಂತರಾಜ್ ಪಾಟೀಲ್ ಹೇಳಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಶಿವರಾಜ್ ಪಾಟೀಲ್, ನೆಲಹೊನ್ನೆ ಮಂಜುನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ್, ತಾಲ್ಲೂಕು ಅಧ್ಯಕ್ಷ ಜೆ.ಕೆ. ಸುರೇಶ್, ಕಾರ್ಯದರ್ಶಿ ಸಿ.ಆರ್. ಶಿವಾನಂದ್, ಕಾರ್ಯದರ್ಶಿ ಅರಕೆರೆ ನಾಗರಾಜ್, ಕೂಲಂಬಿ ಬಸವರಾಜ್ ಮಾತನಾಡಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ನಂದೀಶ್, ಹೊನ್ನಾಳಿ ಪುರಸಭೆಯ ಅಧ್ಯಕ್ಷ ಕೆ.ವಿ. ಶ್ರಿಧರ್, ಸದಸ್ಯ ರಂಗನಾಥ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಎಂ.ಆರ್. ಮಹೇಶ್, ಸುರೇಂದ್ರನಾಯ್ಕ, ಉಮಾ ಎಂ.ಪಿ. ರಮೇಶ್, ದೀಪಾ ಜಗದೀಶ್, ಮುಖಂಡರಾದ ಎ.ಬಿ. ಹನುಮಂತಪ್ಪ, ಯಕ್ಕನಹಳ್ಳಿ ಟಿ.ಎಸ್. ಜಗದೀಶ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.