ಚನ್ನಗಿರಿ: ಪಟ್ಟಣದಲ್ಲಿ ₹1 ಕೋಟಿ ವೆಚ್ಚದ ಕನ್ನಡ ಭವನ ನಿರ್ಮಾಣಕ್ಕೆ ಅಗತ್ಯವಾದ ಅನುದಾನ ಮಂಜೂರು ಮಾಡಿಸಲು ಬದ್ಧನಾಗಿದ್ದೇನೆ. ಕನ್ನಡದ ಕೆಲಸ ಮಾಡುವವರಿಗೆ ಸದಾ ಪ್ರೋತ್ಸಾಹ ನೀಡಲಾಗುವುದು ಎಂದು ಶಾಸಕ ಬಸವರಾಜು ವಿ. ಶಿವಗಂಗಾ ಹೇಳಿದರು.
ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ತಾಲ್ಲೂಕು ಆಡಳಿತದಿಂದ ಬುಧವಾರ ನಡೆದ 68 ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕನ್ನಡಿಗರಾದ ನಾವುಗಳು ಪುಣ್ಯಕೋಟಿ ಇದ್ದಂತೆ. ಕರ್ನಾಟಕದ ಜನರು ಕೇಳಿದ್ದನ್ನು ನೀಡುವವರು. ಕನ್ನಡ ಕಲಿಯುವವ ಜ್ಞಾನಿ, ಕನ್ನಡ ಭಾಷೆ ಕಲಿಸುವವ ದಾನಿ’ ಎಂದು ವಿಶ್ಲೇಷಿಸಿದರು.
‘ಕನ್ನಡದ ಕಂಪನ್ನು ಇಡೀ ವಿಶ್ವಕ್ಕೆ ಪಸರಿಸುವ ಕಾರ್ಯವನ್ನು ಮಾಡಲು ಕನ್ನಡಿಗರು ಮುಂದಾಗಬೇಕು. ಈ ನಾಡಿನ ಹೆಮ್ಮೆಯ ನಾಡೋಜ, ಪಂಪ ಪ್ರಶಸ್ತಿ ಪುರಸ್ಕೃತ ಡಾ. ಚಿದಾನಂದಮೂರ್ತಿ ನಮ್ಮ ತಾಲ್ಲೂಕಿನವರು ಎಂಬುದು ಹೆಮ್ಮೆಯ ಸಂಗತಿ. ಈ ವರ್ಷ ಪೂರ್ತಿ ಕನ್ನಡ ಭಾಷೆಯ ಬಗ್ಗೆ ಅರಿವು ಮೂಡಿಸಲು ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕನ್ನಡವನ್ನು ಉಳಿಸಿ, ಬೆಳೆಸಲು ನಾವೆಲ್ಲಾ ಕಂಕಣಬದ್ಧರಾಗಿರೋಣ’ ಎಂದರು.
ಜಾನಪದ ಕಲಾವಿದ ಯುಗಧರ್ಮ ರಾಮಣ್ಣ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಕೆ. ಶಶಿಧರ್, ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ, ತಾಲ್ಲೂಕು ಪಂಚಾಯಿತಿ ಇಒ ಬಿ.ಕೆ. ಉತ್ತಮ, ಬಿಇಒ ಎಲ್. ಜಯಪ್ಪ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಎಲ್.ಜಿ. ಮಧುಕುಮಾರ್, ಸಿಡಿಪಿಓ ಸದಾನಂದ್ ಉಪಸ್ಥಿತರಿದ್ದರು.
ತಹಶೀಲ್ದಾರ್ ಪಿ.ಎಸ್. ಎರ್ರಿಸ್ವಾಮಿ ಧ್ವಜಾರೋಹಣ ನೆರವೇರಿಸಿ ಸಂದೇಶ ಓದಿದರು. ವಿವಿಧ ಶಾಲೆಗಳ ಮಕ್ಕಳು ಗೌರವ ಪಥ ಸಂಚಲನ ನಡೆಸಿದರು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಯಿತು. ನಂತರ ಬಸವ ಇಂಟರ್ ನ್ಯಾಷನಲ್ ಸ್ಕೂಲ್, ನವಚೇತನ, ತರಳಬಾಳು ಶಾಲೆ ಹಾಗೂ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡುವ ಮೂಲಕ ನೆರೆದಿದ್ದ ಕನ್ನಡಾಭಿಮಾನಿಗಳನ್ನು ರಂಜಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.