ಉಚ್ಚಂಗಿದುರ್ಗ: ಅರಸೀಕೆರೆ ಹೋಬಳಿಯನ್ನು ಶೈಕ್ಷಣಿಕ ಕೇಂದ್ರವನ್ನಾಗಿಸಲು ಶಾಸಕರು ಹಾಗೂ ಸಂಸದರು ಸಹಕರಿಸಬೇಕು ಎಂದು ಅರಸೀಕೆರೆ ಕೋಲಶಾಂತೇಶ್ವರ ಮಠದ ಶಾಂತಲಿಂಗ ದೇಶೀಕೇಂದ್ರ ಸ್ವಾಮೀಜಿ ಹೇಳಿದರು.
ಸಮೀಪದ ಅರಸೀಕೆರೆಯ ಕೋಲ ಶಾಂತೇಶ್ವರ ಮಠದಲ್ಲಿ ಭಾನುವಾರ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದ ಶಾಸಕ ಎಸ್.ವಿ ರಾಮಚಂದ್ರ ಅವರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅರಸೀಕೆರೆಗೆ ಕೇಂದ್ರೀಯ ವಿದ್ಯಾಲಯ ಮಂಜೂರು ಆಗಿದೆ. ಸೈನಿಕ ಶಾಲೆ ನಿರ್ಮಾಣದ ಕುರಿತು ಚರ್ಚೆಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಶ್ರಮಿಸಬೇಕು. ಅರಸೀಕೆರೆ ಗ್ರಾಮ ಪಂಚಾಯಿತಿಯನ್ನು ಮೇಲ್ದರ್ಜೆಗೆ ಏರಿಸಿ ಪಟ್ಟಣ ಪಂಚಾಯಿತಿ ಮಾಡುವ ಕುರಿತು ಶಾಸಕರು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡಬೇಕು. ಜನಪ್ರತಿನಿಧಿಗಳು ಜನಾನುರಾಗಿಗಳಾಗಿ ಇರಬೇಕು. ಅವರ ಅಭಿವೃದ್ಧಿ ಕೆಲಸ ಶಾಶ್ವತವಾಗಿ ಉಳಿಯಬೇಕು. ಈ ದಿಸೆಯಲ್ಲಿ ಶಾಸಕರು, ಸಂಸದರು ಕಾರ್ಯಮಾಡಬೇಕು ಎಂದು ಕಿವಿಮಾತು ಹೇಳಿದರು.
ಶಾಸಕ ಎಸ್.ವಿ. ರಾಮಚಂದ್ರ, ‘ಬಳ್ಳಾರಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅರಸೀಕೆರೆ ಬ್ಲಾಕ್ ಅಭಿವೃದ್ಧಿಯಿಂದ ವಂಚಿತಗೊಂಡಿದೆ. ಈ ನಡುವೆಯೂ ಅರಸೀಕೆರೆ-ಕಂಚಿಕೆರೆರಸ್ತೆ ಕಾಮಗಾರಿಯನ್ನು ಎರಡುವಾರದೊಳಗೆ ಆರಂಭಿಸಲಾಗುವುದು. ಅರಸೀಕೆರೆಗೆ ಹೈಟೆಕ್ ಬಸ್ ನಿಲ್ದಾಣ ಮಂಜೂರಾಗಿದ್ದು, ಕಾಮಗಾರಿಗೆ ಚಾಲನೆ ನೀಡಲಾಗುವುದು. ಕೇವಲ ಒಂದು ಸಮುದಾಯದ ಅಭಿವೃದ್ಧಿಗೆ ಶ್ರಮಿಸದೇ ಎಲ್ಲ ಜನಾಂಗದ ಏಳಿಗೆಗಾಗಿ ದುಡಿಯುವ ಹಂಬಲವಿದೆ. ಮುಖ್ಯಮಂತ್ರಿ ಕೂಡ ಸ್ಪಂದಿಸಿದ್ದು, ಕೋವಿಡ್ ನಿಯಂತ್ರಣಕ್ಕೆ ಬಂದಮೇಲೆ ಪರ್ಯಾಯ ಮಾರ್ಗ ಸಿಗಲಿದೆ’ ಎಂದರು.
ಸಂಸದ ವೈ. ದೇವೇಂದ್ರಪ್ಪ, ‘ಅರಸೀಕೆರೆ ಬ್ಲಾಕ್ ಅಭಿವೃದ್ಧಿಗೆ ಶಾಸಕರು ಬೆನ್ನುಲುಬಾಗಿ ನಿಂತಿದ್ದಾರೆ. ವ್ಯಾಪಕವಾಗಿ ಹರಡುತ್ತಿರುವ ಸೋಂಕಿನ ಬಗ್ಗೆ ಜಾಗ್ರತೆ ಅಗತ್ಯ. ಸಾರ್ವಜನಿಕರು ಆತಂಕ ಪಡದೇ ಮುಂಜಾಗ್ರತೆ ವಹಿಸಬೇಕು’ ಎಂದು ಕಿವಿಮಾತು ಹೇಳಿದರು.