ಮಾಯಕೊಂಡ: ತಾಲ್ಲೂಕಿನ ಭಾವಿಹಾಳು ಗ್ರಾಮದಲ್ಲಿ ಬಟ್ಟೆ ಒಣ ಹಾಕಲು ಕಟ್ಟಿದ್ದ ತಂತಿಯಿಂದ ವಿದ್ಯುತ್ ಸ್ಪರ್ಶಸಿ ದಂಪತಿ ಮೃತಪಟ್ಟಿದ್ದಾರೆ.
ಗ್ರಾಮದ ವೀಣಾ (30) ಮತ್ತು ರವಿಶಂಕರ್ (35) ಮೃತರು. ಮನೆಯ ಮುಂದೆಯೇ ಇದ್ದ ವಿದ್ಯುತ್ ಕಂಬಕ್ಕೆ ತಂತಿ ಕಟ್ಟಲಾಗಿತ್ತು. ಮಳೆ ಬಂದಿದ್ದರಿಂದ ತಂತಿಯೊಳಗೆ ವಿದ್ಯುತ್ ಪ್ರವಹಿಸಿದೆ.
ಬಟ್ಟೆಗಳನ್ನು ಒಣಗಿ ಹಾಕಲು ಹೋಗಿದ್ದ ವೀಣಾ ಅವರಿಗೆ ವಿದ್ಯುತ್ ಸ್ಪರ್ಶವಾಗಿ ಕೂಗಿಕೊಂಡಿದ್ದಾರೆ. ಆಗ ಮನೆಯೊಳಗೆ ಇದ್ದ ಪತಿ ರವಿಶಂಕರ್ ಹೊರ ಬಂದು ಬಿಡಿಸಲು ಪ್ರಯತ್ನಿಸಿದಾಗ ಅವರಿಗೂ ವಿದ್ಯುತ್ ಸ್ಪರ್ಶವಾಗಿದೆ.
ಇವರಿಬ್ಬರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಹೊತ್ತಿಗೆ ಮೃತಪಟ್ಟಿದ್ದರು. ದಂಪತಿಗೆ ಇಬ್ಬರು ಚಿಕ್ಕ ಮಕ್ಕಳಿದ್ದಾರೆ ಎಂದು ಪಿಎಸ್ಐ ರೂಪ್ಲಿಬಾಯಿ ತಿಳಿಸಿದ್ದಾರೆ.