ದಾವಣಗೆರೆ: ದಿನಕ್ಕೆ ಎರಡು ಬಾರಿ ತಪಾಸಣೆ, ಬೆಳಿಗ್ಗೆ ವ್ಯಾಯಾಮ, ಸಂಜೆ ಯೋಗ, ಹೊತ್ತು ಹೊತ್ತಿಗೆ ಊಟ, ಉಪಾಹಾರ. ಎಲ್ಲ ಕೋವಿಡ್ ಸೆಂಟರ್ಗಳಲ್ಲಿ ಕೋವಿಡ್ ಸೋಂಕಿತರಿಗೆ ಸಿಗುತ್ತಿದೆ. ನಿತ್ಯ ಒಂದೇ ರುಚಿ ಎಂಬುದೊಂದು ದೂರು ಬಿಟ್ಟರೆ ಸೋಂಕಿತರು ಉಳಿದಂತೆ ಖುಷಿ ಖುಷಿಯಾಗಿದ್ದಾರೆ.
‘ದಾವಣಗೆರೆಯಲ್ಲಿ ಕಳೆದ ಬಾರಿ ಜೆ.ಎಚ್. ಪಟೇಲ್ ಬಡಾವಣೆ ಮತ್ತು ಬಾಡಾ ಕ್ರಾಸ್ನಲ್ಲಿ ಮಾತ್ರ ಕೋವಿಡ್ ಕೇರ್ ಸೆಂಟರ್ಗಳನ್ನು ಮಾಡಲಾಗಿತ್ತು. ಈ ಬಾರಿ ತರಳಬಾಳು ಸೇರಿ ಐದು ಸಿಸಿಸಿಗಳಿವೆ. ಕಳೆದ ವರ್ಷ 2,500 ಮಂದಿ ಕೋವಿಡ್ ಕೇರ್ ಸೆಂಟರ್ಗೆ ದಾಖಲಾಗಿದ್ದರು. ಅದರಲ್ಲಿ ಶೇ 99ರಷ್ಟು ಮಂದಿ ಗುಣಮುಖರಾಗಿ ನೇರವಾಗಿ ಮನೆಗೆ ಹೋಗಿದ್ದಾರೆ. ಶೇ 1ರಷ್ಟು ಮಂದಿಯನ್ನು ಮಾತ್ರ ಇಲ್ಲಿಂದ ಆಸ್ಪತ್ರೆಗೆ ದಾಖಲಿಸಬೇಕಾಯಿತು. ಈ ಬಾರಿ ಗುಣಮುಖರಾಗಿ ಇಲ್ಲಿಂದ ಮನೆಗೆ ಹೋಗುವವರ ಪ್ರಮಾಣ ಶೇ 98 ಇದೆ’ ಎಂದು ದಾವಣಗೆರೆ ತಾಲ್ಲೂಕಿನ ಕೋವಿಡ್ ಕೇರ್ ಸೆಂಟರ್ಗಳ ನೋಡಲ್ ಅಧಿಕಾರಿ ಡಾ. ಮಂಜುನಾಥ ತಿಳಿಸಿದರು.
‘ಪ್ರತಿ ಕೋವಿಡ್ ಕೇರ್ ಸೆಂಟರ್ಗಳಿಗೆ ಆಮ್ಲಜನಕ ಸಾಂದ್ರಕವನ್ನು ಈ ಬಾರಿ ಒದಗಿಸಿದ್ದಾರೆ. ಹಾಗಾಗಿ ಸ್ವಲ್ಪ ಉಸಿರಾಟ ಸಮಸ್ಯೆ ಕಾಣಿಸಿಕೊಂಡವರಿಗೆ ಅಲ್ಲೇ ಚಿಕಿತ್ಸೆ ನೀಡಲು ಸಾಧ್ಯವಾಗಿದೆ’ ಎಂದು ವಿವರಿಸಿದರು.
‘ದಾವಣಗೆರೆ ತಾಲ್ಲೂಕಿನ 6, ಹರಿಹರ ತಾಲ್ಲೂಕಿನ 4, ಜಗಳೂರಿನ 2, ಹೊನ್ನಾಳಿ–ನ್ಯಾಮತಿ ತಾಲ್ಲೂಕುಗಳ 4, ಚನ್ನಗಿರಿ ತಾಲ್ಲೂಕಿನ 6 ಹೀಗೆ ಜಿಲ್ಲೆಯ ಎಲ್ಲ 22 ಕೋವಿಡ್ ಕೇರ್ ಸೆಂಟರ್ಗಳಲ್ಲಿ ಬೆಳಿಗ್ಗೆ ವ್ಯಾಯಾಮ ಶಿಕ್ಷಕರು ಬಂದು ವ್ಯಾಯಾಮ ಹೇಳಿಕೊಡುತ್ತಾರೆ. ಪ್ರತಿ ಕೇಂದ್ರಕ್ಕೆ ಒಬ್ಬರು ವೈದ್ಯರು ಇರುತ್ತಾರೆ. ಅವರು ಬೆಳಿಗ್ಗೆ ಮತ್ತು ಸಂಜೆ ತಪಾಸಣೆ ನಡೆಸುತ್ತಾರೆ. ಬಿಸಿನೀರು, ಶುದ್ಧ ಕುಡಿಯುವ ನೀರು ಒದಗಿಸಲಾಗಿದೆ. ಎಲ್ಲೂ ಆರೈಕೆದಾರರ ಕೊರತೆಯಾಗದಂತೆ ನೋಡಿಕೊಂಡಿದ್ದೇವೆ’ ಎಂದು ಜಿಲ್ಲೆಯ ಕೋವಿಡ್ ಕೇರ್ ಸೆಂಟರ್ಗಳ ನೋಡಲ್ ಅಧಿಕಾರಿ ಡಾ. ನಟರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಊಟ ಒಂದೇ ರುಚಿ ಇರುತ್ತದೆ. ಅದೇ ಚಪಾತಿ, ಅನ್ನ, ಅದೇ ಸಾಂಬಾರು ತಿನ್ನಬೇಕಾಗುತ್ತದೆ. ನಿತ್ಯ ಬೇರೆ ಬೇರೆ ರುಚಿ ನೀಡಿದ್ದರೆ ಚೆನ್ನಾಗಿರುತ್ತದೆ. ಟಾಯ್ಲೆಟ್, ಬಾತ್
ರೂಂಗಳನ್ನು ಎರಡು ಮೂರು ದಿನಗಳಿಗೊಮ್ಮೆ ಸ್ವಚ್ಛಗೊಳಿಸುವವರು ಬರುತ್ತಾರೆ. ಅದರಲ್ಲಿ ಸೋಂಕಿತರ ತಪ್ಪು ಕೂಡ ಇದೆ. ಸೋಂಕಿತರು ಅಂದಾಗ ಎಲ್ಲರೂ ದೂರ ಇರುತ್ತಾರೆ. ಹಾಗಾಗಿ ನಾವಿರುವಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದು ಸೋಂಕಿತರಿಗೂ ಅನ್ನಿಸಿದರೆ ತೊಂದರೆಯಾಗುವುದಿಲ್ಲ’ ಎಂದು ತರಳಬಾಳು ಕೋವಿಡ್ ಸೆಂಟರ್ನಲ್ಲಿರುವ ಸೋಂಕಿತ ಪ್ರಕಾಶ್ ಹೇಳಿದರು.
ದಾನಿಗಳು ಆಹಾರ ನೀಡಿದರೆ ಉತ್ತಮ
ಕೋವಿಡ್ ಕೇರ್ ಸೆಂಟರ್ಗಳಿಗೆ ನಿಗದಿತ ಆಹಾರವನ್ನು ಪೂರೈಸಲಾಗುತ್ತಿದೆ. ಕೆಲವು ಕೋವಿಡ್ ಕೇರ್ ಸೆಂಟರ್ಗಳಲ್ಲಿ ದಾನಿಗಳು ಬೇರೆ ಬೇರೆ ರೀತಿಯ ಆಹಾರ ನೀಡುತ್ತಾರೆ. ಅದೇ ರೀತಿ ಎಲ್ಲ ಸೆಂಟರ್ಗಳಲ್ಲಿ ನೀಡಲು ಸಾಧ್ಯವಾದರೆ ಆಹಾರದಲ್ಲಿ ವೈವಿಧ್ಯ ಬರಲು ಸಾಧ್ಯ. ಹೆಚ್ಚಿನ ಸೋಂಕಿತರಿಗೆ ಬಾಯಿ ರುಚಿಯೂ ಹೋಗಿರುವುದರಿಂದ ಆಹಾರ ರುಚಿ ಇಲ್ಲ ಎಂದು ಸಹಜವಾಗಿ ಅನ್ನಿಸುತ್ತದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ. ರಾಘವನ್ ಹೇಳಿದರು.
5,674 ಮಂದಿ ಸಿಸಿಸಿಗೆ
ಜಿಲ್ಲೆಯಲ್ಲಿ ಈ ಬಾರಿ 5,674 ಮಂದಿಯನ್ನು ಕೋವಿಡ್ ಕೇರ್ ಸೆಂಟರ್ಗೆ ದಾಖಲಿಸಲಾಗಿದೆ. ಮೊದಲು ಜಿಲ್ಲಾ ಆಸ್ಪತ್ರೆಯಲ್ಲಿಯೇ ಟ್ರಯೇಜ್ ನಡೆಸುತ್ತಿದ್ದರೆ, ಈಗ ಸಿಸಿಸಿಗಳಲ್ಲಿಯೂ ನಡೆಸಲಾಗುತ್ತಿದೆ. ಸೋಂಕಿತರ ಸ್ಥಿತಿ ನೋಡಿಕೊಂಡು ಅದರಲ್ಲಿ 463 ಮಂದಿಯನ್ನು ಮತ್ತೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. 4,397 ಮಂದಿ ಗುಣಮುಖರಾಗಿ ಮನೆಗೆ ಹೋಗಿದ್ದಾರೆ. ಸದ್ಯ 814 ಮಂದಿ ಸಿಸಿಸಿಯಲ್ಲಿದ್ದಾರೆ ಎಂದು ಜಿಲ್ಲೆಯ ಕೋವಿಡ್ ಕೇರ್ ಸೆಂಟರ್ಗಳ ನೋಡಲ್ ಅಧಿಕಾರಿ ಡಾ. ನಟರಾಜ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.