ದಾವಣಗೆರೆ: ನೇರ ಪಾವತಿ ಪೌರಕಾರ್ಮಿಕರನ್ನು ಕಾಯಂ ಮಾಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ‘ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಸಂಘ’ದ ನೇತೃತ್ವದಲ್ಲಿ ಪಾಲಿಕೆಯ ಹೊರಗುತ್ತಿಗೆ ಪೌರಕಾರ್ಮಿಕರು ಶುಕ್ರವಾರದಿಂದ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದರು.
ಇಲ್ಲಿನ ಮಹಾನಗರಪಾಲಿಕೆ ಆವರಣದಲ್ಲಿ ಧರಣಿ ಆರಂಭಿಸಿದ ಕಾರ್ಮಿಕರು ತಮ್ಮ ಬೇಡಿಕೆ ಈಡೇರಿಸದ ಮಹಾನಗರ ಪಾಲಿಕೆ, ಜಿಲ್ಲಾಡಳಿತದ ವಿರುದ್ಧ ಘೋಷಣೆಕೂಗಿದರು.
ನೇರ ಪಾವತಿ ಪೌರಕಾರ್ಮಿಕರ ನೇಮಕಾತಿ ವಿಚಾರದಲ್ಲಿ ಸರ್ಕಾರ ಮೌನ ವಹಿಸುವ ಮೂಲಕ ಪೌರಕಾರ್ಮಿಕರನ್ನು ಕಡೆಗಣಿಸಿದೆ. ಹಲವಾರು ಬಾರಿ ಮುಖ್ಯಮಂತ್ರಗಳಿಗೆ ಮನವಿ ಸಲ್ಲಿಸಿದ್ದರೂಯಾವುದೇ ಪ್ರಯೋಜನ ಆಗಿಲ್ಲ.ಸರ್ಕಾರ ಈಗ ನೀಡುತ್ತಿರುವ ವೇತನ, ಸೌಲಭ್ಯ ಸಾಕಾಗುತ್ತಿಲ್ಲ. ಕಡಿಮೆ ವೇತನದಲ್ಲಿ ಜೀವನ ನಡೆಸಲು ಸಾಧ್ಯವಿಲ್ಲ. ನೇರ ಪಾವತಿ ಕಾರ್ಮಿಕರನ್ನು ಕಾಯಂಗೊಳಿಸಬೇಕು. ಸ್ಮಶಾನ ಕಾವಲುಗಾರ ಗುತ್ತಿಗೆ ಪದ್ಧತಿ ರದ್ದುಪಡಿಸಬೇಕು. ಮರಣ ಹೊಂದಿದ ನೇರ ಪಾವತಿ ಕಾರ್ಮಿಕರ ಮಕ್ಕಳನ್ನುಕೆಲಸಕ್ಕೆ ತೆಗೆದುಕೊಳ್ಳಬೇಕು ಎಂದು ಸಂಘದ ರಾಜ್ಯ ಉಪಾಧ್ಯಕ್ಷ ಎಲ್.ಎಂ. ಹನುಮಂತಪ್ಪ ಒತ್ತಾಯಿಸಿದರು.
ಆರು ತಿಂಗಳಿನಿಂದ ವೇತನವಿಲ್ಲದೆ ಕೆಲಸಮಾಡಿರುವ 89 ಜನ ಪೌರಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳಬೇಕು. ವಯಸ್ಸಾಗಿರುವ ಕಾರಣಕ್ಕೆ ಕೆಲಸ ಬಿಡಿಸಿರುವ ಪೌರಕಾರ್ಮಿಕರಿಗೆ ಪರಿಹಾರ ನೀಡಬೇಕು. ಅವರ ಕುಟುಂಬದ ಸದಸ್ಯರೊಬ್ಬರಿಗೆ ಕೆಲಸ ನೀಡಬೇಕು ಎಂದು ಅವರುಆಗ್ರಹಿಸಿದರು.
ಸಂಘದ ಮುಖಂಡರಾದ ಎನ್.ನೀಲಗಿರಿಯಪ್ಪ, ಜಿ.ಬಸವರಾಜ್, ಎಲ್.ಎಚ್.ಸಾಗರ್,ವೀರೇಶ್, ಹುಚ್ಚೆಂಗಪ್ಪ, ಅಂಜಿನಪ್ಪ, ಕಾಂತರಾಜ್, ಕಿರಣ್, ಶಿವರಾಜ್, ಆದಾಪುರ ಸೇರಿ ನೂರಾರು ಕಾರ್ಮಿಕರು ಭಾಗವಹಿಸಿದ್ದರು.