ದಾವಣಗೆರೆ: ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿಯನ್ನು ಭಾನುವಾರ ನಗರದಲ್ಲಿ ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ಕೆಲವು ಭಾಗಗಳಲ್ಲಿ ಸೋಮವಾರ ನಾಗರ ಪಂಚಮಿ ನಡೆಯಲಿದೆ.
ಮಹಿಳೆಯರು–ಮಕ್ಕಳು ಮರಕ್ಕೆ ಜೋಕಾಲಿ ಕಟ್ಟಿ ಆಡಿದರೆ, ಯುವಕರು ದೈಹಿಕ ಕಸರತ್ತಿನ ಕ್ರೀಡೆಗಳಲ್ಲಿ ಪಾಲ್ಗೊಂಡು ಮನೋರಂಜನೆ ಪಡೆದರು. ಬೆಳಿಗ್ಗೆ ಮಹಿಳೆಯರು ಮನೆಯ ಮುಂದೆ ರಂಗೋಲಿಯಲ್ಲಿ ಬಣ್ಣ ಬಣ್ಣದ ನಾಗನ ಚಿತ್ರ ಬಿಡಿಸಿದರು. ಹೊಸ ಬಟ್ಟೆ ತೊಟ್ಟು ದೇವಸ್ಥಾನ, ನಾಗಪ್ಪನ ಕಟ್ಟೆಗಳಿಗೆ ತೆರಳಿ ಹಾಲೆರೆದರು.
ನಾಗರ ಪಂಚಮಿಯ ಪ್ರಯುಕ್ತ ಹೂವು ಹಣ್ಣುಗಳ ದರ ಏರಿಕೆಯಾಗಿವೆ. ಅದರಲ್ಲೂ ಬಾಳೆಹಣ್ಣಿನ ದರ ದುಪ್ಪಟ್ಟಾಗಿದೆ. ಎರಡು ದಿನಗಳ ಹಿಂದೆ ಏಲಕ್ಕಿ ಬಾಳೆಹಣ್ಣು ಕೆ.ಜಿ.ಗೆ ₹ 50– ₹ 60 ಇದ್ದಿದ್ದು, ಭಾನುವಾರ ₹ 100ಕ್ಕೆ ತಲುಪಿತ್ತು. ತೆಂಗಿನಕಾಯಿ ದರ ₹ 5 ಹೆಚ್ಚಳವಾಗಿತ್ತು.
ಕೆಲವೆಡೆ ಜಾಗೃತಿ: ನಾಗರ ಪಂಚಮಿ ದಿನ ಪೂಜಿಸಿದ ಬಳಿಕ ಹಾಲನ್ನು ಎರೆಯಬೇಡಿ ಕುಡಿಯಿರಿ ಎಂದು ವಿವಿಧ ಮಠಗಳಿಂದ ಜಾಗೃತಿ ಮೂಡಿಸುವ ಕಾರ್ಯಗಳೂ ಕೆಲವೆಡೆ ನಡೆದವು. ವಿರಕ್ತಮಠದಿಂದ ಬಸವಪ್ರಭು ಸ್ವಾಮೀಜಿ ನೇತೃತ್ವದಲ್ಲಿ ಹಾಲು ಕುಡಿಸುವ ಜಾಗೃತಿ ಅಭಿಯಾನವನ್ನು ಸೋಮವಾರ ಹಮ್ಮಿಕೊಳ್ಳಲಾಗಿದೆ.