ದಾವಣಗೆರೆ: ವಿಧಾನಸಭಾ ಕಲಾಪದ ವೇಳೆ ಬಿಜೆಪಿ, ಜೆಡಿಎಸ್ ಶಾಸಕರು ಮಸೂದೆಯ ಪ್ರತಿಗಳನ್ನು ಹರಿದು ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರ ಮೇಲೆ ಎಸೆದಿರುವುದನ್ನು ದಾವಣಗೆರೆ ಜಿಲ್ಲಾ ಬಂಜಾರ ಸಂಘ ಖಂಡಿಸಿದೆ.
‘ಸಭಾಧ್ಯಕ್ಷರ ಪೀಠಕ್ಕೆ ಮತ್ತು ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿಯವರ ಮೇಲೆ ನಡೆದ ಕೃತ್ಯ ಪ್ರಜಾಪ್ರಭುತ್ವಕ್ಕೆ, ಸಂವಿಧಾನಕ್ಕೆ ಮಾಡಿದ ಅಕ್ಷಮ್ಯ ಅಪರಾಧ. ಈ ಘಟನೆಗೆ ಕಾರಣರಾದ ಎಲ್ಲಾ ಶಾಸಕರಾದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಎಸ್. ನಂಜಾನಾಯ್ಕ ಹಾಗೂ ಕಾರ್ಯದರ್ಶಿ ಕೆ.ಆರ್. ಮಲ್ಲೇಶ್ ನಾಯ್ಕ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
‘ಮುಗ್ಧ, ಸರಳ, ಸಜ್ಜನಿಕೆಯ ಲಂಬಾಣಿ ಜನಾಂಗದ ರಾಜಕಾರಣಿ ರುದ್ರಪ್ಪ ಲಮಾಣಿಯವರು ಸಭಾಪತಿ ಪೀಠದಲ್ಲಿರುವಾಗಲೇ ನಡೆದಿರುವ ಈ ಕೃತ್ಯ ಖಂಡನೀಯ, ಎಲ್ಲರೂ ಕ್ಷಮೆ ಕೇಳಬೇಕು. ಅವರ ಶಾಸಕ ಸ್ಥಾನವನ್ನು ಈ ತಕ್ಷಣ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
‘ಬಿಜೆಪಿಯವರಿಗೆ ದಮನಿತರು, ದಲಿತರು, ಅಲೆಮಾರಿಗಳು ಮತ್ತು ತುಳಿತಕ್ಕೆ ಒಳಗಾದ ಸಮಾಜದವರು, ಮೇಲ್ಮಟ್ಟದ ರಾಜಕಾರಣದ ಅಧಿಕಾರದಲ್ಲಿ ಇರುವುದನ್ನು ಸಹಿಸುವುದಿಲ್ಲ ಎಂಬುದು ಈ ವರ್ತನೆಯಿಂದ ಮೇಲ್ನೋಟಕ್ಕೆ ಕಂಡು ಬರುತ್ತದೆ. ಇದನ್ನು ಸಹಿಸಲಾಗದ ಇವರು ಹೇಗೆ ತಾನೆ ಪ್ರಜಾಪ್ರಭುತ್ವಕ್ಕೆ, ಸಂವಿಧಾನದ ಆಶಯಗಳಿಗೆ ಗೌರವಿಸಲು ಸಾಧ್ಯ. ಸಂಸ್ಕಾರ, ಸಂಸ್ಕೃತಿ ಇಲ್ಲದ ಇಂತಹವರು ಶಾಸಕರಾಗಿ ಇರಲು ಅನರ್ಹರು. ಈ ಕುರಿತು ರಾಜ್ಯದ ಎಲ್ಲಾ ತುಳಿತ, ದಮನಿತ ಸಮಾಜದ ಮುಖಂಡರೊಂದಿಗೆ ಚರ್ಚಿಸಿ, ಮುಂದಿನ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸಲಾಗುವುದು’ ಎಂದು ತಿಳಿಸಿದರು.
ಎಸ್. ಬಸವರಾಜಯ್ಯ, ಲಕ್ಷ್ಮಣ್ ರಮಾವತ್, ಸಂದೇಶ್ ನಾಯ್ಕ, ಗುರುಮೂರ್ತಿ ಮಿಯಾಪುರ, ಲಿಂಗರಾಜ, ರವಿನಾಯ್ಕ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.