ಕೊನೇ ಕ್ಷಣದವರೆಗೆ ಪ್ರಕಟವಾಗದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ದಾವಣಗೆರೆ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೋಮವಾರವೇ ಪ್ರದಾನ ಮಾಡಲಾಗುತ್ತಿದ್ದು, ಪಟ್ಟಿ ಮಾತ್ರ ಭಾನುವಾರ ಸಂಜೆಯವರೆಗೂ ಪ್ರಕಟವಾಗಿಲ್ಲ. ಅರ್ಹರು, ಪ್ರಶಸ್ತಿ ಸಿಕ್ಕೇ ಸಿಗುತ್ತದೆ ಎಂಬ ನಿರೀಕ್ಷೆ ಇರುವವರು ಎಲ್ಲರೂ ಕಾಯುವಂತಾಗಿದೆ.
ಪ್ರಶಸ್ತಿ ಪುರಸ್ಕೃತರ ಸಂಖ್ಯೆ ಅರ್ಧ ಶತಕ (51) ಗಡಿ ದಾಟಿದೆ. ಕೆಲವರ ಹೆಸರು ಕೊನೇ ಕ್ಷಣದಲ್ಲಿ ಸೇರ್ಪಡೆಗೊಂಡಿದೆ. ಎಲ್ಲರ ಹಿನ್ನೆಲೆಯನ್ನು ನೋಡಲು, ಯಾವುದಾದರೂ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರಾ ಎಂದು ಪರಿಶೀಲಿಸುವಂತೆ ಕೊನೇಕ್ಷಣದಲ್ಲಿ ಪೊಲೀಸ್ ಇಲಾಖೆಗೆ ಪಟ್ಟಿ ಹೋಗಿದೆ. ಅಲ್ಲಿ ಪರಿಶೀಲನೆ ಮುಗಿಯದ ಕಾರಣ ಪಟ್ಟಿ ಪ್ರಕಟಗೊಂಡಿಲ್ಲ.
‘ಸೋಮವಾರವೇ ಪಟ್ಟಿಯನ್ನೂ ಪ್ರಕಟ ಮಾಡುತ್ತೇವೆ. ಪ್ರಶಸ್ತಿಯನ್ನೂ ಪ್ರಕಟ ಮಾಡುತ್ತೇವೆ. ಪೊಲೀಸ್ ಇಲಾಖೆಯಿಂದ ಪರಿಶೀಲನೆಯಾಗಿ ಪಟ್ಟಿ ಬರುತ್ತದೆ. ರಾತ್ರಿಯೇ ಎಲ್ಲ ಪ್ರಶಸ್ತಿ ವಿಜೇತರಿಗೆ ಕರೆ ಮಾಡಿ ತಿಳಿಸುತ್ತೇವೆ’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.
‘ಪೊಲೀಸರಿಂದ ಪರಿಶೀಲನೆಗೊಂಡು ಬಂದ ಕೂಡಲೇ ಜಿಲ್ಲಾಧಿಕಾರಿಯವರ ಗಮನಕ್ಕೆ ತಂದು ಬಿಡುಗಡೆ ಮಾಡುತ್ತೇವೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ ಪ್ರತಿಕ್ರಿಯಿಸಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ಯಾಕೆ ತಡವಾಗಿದೆ ಎಂದು ಪ್ರತಿಕ್ರಿಯೆ ಕೇಳಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಅವರಿಗೆ ಕರೆ ಮಾಡಿದರೆ ಅವರು ಕರೆ ಸ್ವೀಕರಿಸಲಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.