ದಾವಣಗೆರೆ: ಮಹಿಳೆಯರಿಗೆ ಫ್ಯಾಷನ್ ಅಂದರೆ ಆಸಕ್ತಿ ಜಾಸ್ತಿ. ಹಾಗಂತ ನಮ್ಮ ಶರಣ ಸಂಸ್ಕೃತಿಯನ್ನು, ಶರಣರ ವಚನಗಳನ್ನು ಮರೆಯಬಾರದು ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.
ನಗರದ ಶಿವಯೋಗಾಶ್ರಮದಲ್ಲಿ ಜಯದೇವ ಶ್ರೀಗಳ 63ನೇ ಸ್ಮರಣೋತ್ಸವ ಅಂಗವಾಗಿ ನಡೆದ ಮಹಿಳೆಯರ ಸಮೂಹ ವಚನಗಾಯನ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.
ವಚನಗಳನ್ನು ಸಾಮೂಹಿಕವಾಗಿ ಹಾಡುವ ತಂಡಗಳ ಸಂಖ್ಯೆ ದಾವಣಗೆರೆಯಲ್ಲಿ ಹೆಚ್ಚಿರುವುದು ಒಳ್ಳೆಯ ಬೆಳವಣಿಗೆ. ವಚನ ಸಾಹಿತ್ಯ ಕನ್ನಡ ಸಾಹಿತ್ಯದ ಹೆಜ್ಜೆನು. ವಚನಗಳು ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ ಎಂದು ಹೇಳಿದರು.
ಕದಳಿ ವೇದಿಕೆ ಅಧ್ಯಕ್ಷೆ ಯಶಾ ದಿನೇಶ್, ತೀರ್ಪುಗಾರರಾದ ರೇವಣಸಿದ್ದಪ್ಪ, ದಮಯಂತಿ ಗೌಡರ್ ಇದ್ದರು.
ಸ್ಪರ್ಧೆಯಲ್ಲಿ 25ಕ್ಕೂ ಅಧಿಕ ತಂಡಗಳು ಭಾಗವಹಿಸಿದ್ದವು. ಮರುಳಸಿದ್ದೇಶ್ವರ ತಂಡ ಪ್ರಥಮ, ಸ್ನೇಹಾ ತಂಡ ದ್ವಿತೀಯ ಹಾಗೂ ಸರಸ್ವತಿ ತಂಡವು ತೃತೀಯ ಬಹುಮಾನ ಪಡೆದವು.