ದಾವಣಗೆರೆ: ‘ರೈತರ ಹೋರಾಟದ ಹಿಂದೆ ದಲ್ಲಾಳಿಗಳಿದ್ದಾರೆ.ರೈತರ ಸಮಸ್ಯೆಗಳನ್ನು ಆಲಿಸಲು ಸರ್ಕಾರ ಸಿದ್ಧವಿದೆ. ಆದರೆ ಯಾವ ರೈತ ಮುಖಂಡರು ಸಮಸ್ಯೆ ಹಂಚಿಕೊಳ್ಳಲು ಸಿದ್ದರಿಲ್ಲ’ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಆರೋಪಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮೆಕ್ಕೆಜೋಳ ಖರೀದಿ ಕೇಂದ್ರ ಸೇರಿ ರೈತರ ಬೇಡಿಕೆಗೆ ಸರ್ಕಾರ ಯಾವಾಗಲೂ ಸ್ಪಂದಿಸುತ್ತಿದೆ. ಆದರೆ ರೈತ ಮುಖಂಡರು ಸರ್ಕಾರದ ಜತೆ ಮಾತನಾಡಲು ಸಿದ್ಧರಿಲ್ಲ’ ಎಂದರು.
‘ಜಿಲ್ಲೆಗೊಂದರಂತೆ ಗೋ ಶಾಲೆ ಪ್ರಾರಂಭಿಸುವ ಚಿಂತನೆ ಇದೆ. ಇದರ ಉಸ್ತುವಾರಿಗೆ ಅಧಿಕಾರಿಗಳ ನೇಮಕ ಮಾಡಲಾಗುವುದು. ವಿರೋಧ ಪಕ್ಷಗಳ ಹೇಳಿಕೆ ಬಗ್ಗೆತಲೆಕೆಡಿಸಿಕೊಳ್ಳಬೇಕಿಲ್ಲ.ಜಾನುವಾರು ಸಂತೆಗಳ ಮೇಲೆ ನಿಗಾ ವಹಿಸಲು ಚಿಂತನೆ ನಡೆಸಲಾಗಿದೆ’ ಎಂದು ಹೇಳಿದರು.
‘ತುಂಬ ದಿನದಿಂದ ಮಿತ್ರ ಮಂಡಳಿಯವರು ಸಭೆ ಸೇರಿರಲಿಲ್ಲ.ಹೀಗಾಗಿ ಎಲ್ಲರೂ ಒಟ್ಟಾಗಿ ಸೇರಿ ಊಟ ಮಾಡಿದ್ದೇವೆ. ಈ ವೇಳೆ ಕೆಲವು ವಿಚಾರಗಳನ್ನು ಚರ್ಚೆ ಮಾಡಿದ್ದೇವೆ. ಮಿತ್ರ ಮಂಡಳಿಯಲ್ಲಿ ಮೂವರಿಗೆ ಸಚಿವ ಸ್ಥಾನ ನೀಡುವಂತೆ ಮುಖ್ಯಮಂತ್ರಿ ಬಳಿ ಮನವಿ ಮಾಡಿದ್ದೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.