ದಾವಣಗೆರೆ: ನೂತನ ಭೂಸುಧಾರಣಾ ಕಾಯ್ದೆ ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ) ಕಾರ್ಯಕರ್ತರು ನಗರದಲ್ಲಿ ಪತ್ರಿಭಟಿಸಿದರು.
ಉಪ ವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟಿಸಿದ ರೈತರು, ‘ನೂತನ ಭೂಸುಧಾರಣಾ ಕಾಯ್ದೆಯು ರೈತರ ಪಾಲಿಗೆ ಕಂಟಕವಾಗಿದೆ. ಕೇಂದ್ರ ಸರ್ಕಾರವು ಈಗಾಗಲೇ ಬಿಜ ಕಾಯ್ದೆ (ತಿದ್ದುಪಡಿ) 2019, ಎಪಿಎಂಸಿ (ತಿದ್ದುಪಡಿ) ಕಾಯ್ದೆ 2020 ಹಾಗೂ ಗುತ್ತಿಗೆ ಬೇಸಾಯ ಪದ್ಧತಿಗಳನ್ನು ಜಾರಿಗೆ ತರುವ ಮೂಲಕ ಖಾಸಗೀಕರಣ ಮಾಡುತ್ತಿದೆ. ಇದರ ನಡುವೆ ಭೂಸುಧಾರಣಾ ಕಾಯ್ದೆಗೆ ತಿದ್ದಪಡಿ ತಂದಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರೈತರ ಪರವೋ ಅಥವಾ ಕಂಪನಿಗಳ ಪರವೋ ಎಂಬ ಅನುಮಾನ ಮೂಡುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಬಂಡವಾಳಶಾಹಿಗಳು ಹಾಗೂ ಕಪ್ಪುಹಣ ಹೊಂದಿರುವ ರಾಜಕಾರಣಿಗಳು, ಅಧಿಕಾರಿಗಳು ನೂತನ ಭೂಸುಧಾರಣೆ ಕಾಯ್ದೆಯ ಮೂಲಕ ರೈತರ ಜಮೀನನ್ನು ಕಬಳಿಸುತ್ತಾರೆ. ಸಣ್ಣ ಹಿಡುವಳಿದಾರರು ಬೀದಿ ಪಾಲಾಗುತ್ತಾರೆ’ ಎಂದು ಆತಂಕ ವ್ಯಕ್ತಪಡಿಸಿದರು.
ಬಗರ್ಹುಕುಂ ಸಾಗುವಳಿದಾರರಿಗೆ ಹಾಗೂ ಅರಣ್ಯ ಸಾಗುವಳಿದಾರರಿಗೆ ಸರ್ಕಾರ ಮೊದಲು ಭೂಮಿಯ ಹಕ್ಕನ್ನು ನೀಡಬೇಕು. ಯಾರು ಬೇಕಾದರೂ ಭೂಮಿ ಖರೀದಿಸಬಹುದು ಎಂಬ ಕಾಯ್ದೆಯನ್ನು ರದ್ದುಗೊಳಿಸದಿದ್ದರೆ 94ಸಿ ಕಾಯ್ದೆ ಅಸ್ತಿತ್ವ ಕಳೆದುಕೊಳ್ಳಲಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ರೈತರ ಹೋರಾಟಕ್ಕೆ ಬೆಲೆ ನೀಡಿ ಸರ್ಕಾರ ನೂತನ ಕಾಯ್ದೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.
ಸಂಘದ ರಾಜ್ಯ ಘಟಕದ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಮ್ಮನೂರು ಬಸವರಾಜ, ಚಿಕ್ಕಮಲ್ಲಹಳ್ಳಿ ಚಿರಂಜೀವಿ, ಆಲೂರು ಪರಶುರಾಮ, ಹುಚ್ಚವ್ವನಹಳ್ಳಿ ಪ್ರಕಾಶ, ಜಗಳೂರು ಸತೀಶ, ಕೋಲ್ಕುಂಟೆ ಹುಚ್ಚೆಂಗಪ್ಪ ಅವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.