ಹರಪನಹಳ್ಳಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಇಲ್ಲಿನ ಭಾರತ ಕಮ್ಯುನಿಷ್ಟ್ ಪಕ್ಷ, ಅಖಿಲ ಭಾರತ ಯುವ ಜನ ಫೆಡರೇಷನ್ ಕಾರ್ಯಕರ್ತರು ಒಂಟೆತ್ತಿನ ಬಂಡಿ ಮೇಲೆ ಬೈಕ್ ಸಾಗಿಸುವ ಮೂಲಕ ಶುಕ್ರವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಇಜಾರಿ ಶಿರಸಪ್ಪ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಒಂಟೆತ್ತಿನ ಬಂಡಿಯ ಮೇಲೆ ಬೈಕ್ ಇಟ್ಟುಕೊಂಡು ರಾಜ್ಯ ಹೆದ್ದಾರಿಯಲ್ಲಿ ಸಂಚಾರ ಮಾಡುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಕಾರ್ಯದರ್ಶಿ ಎಚ್.ಎಂ. ಸಂತೋಷ್ ಮಾತನಾಡಿ, ‘ದೇಶದಲ್ಲಿರುವ ನಿರುದ್ಯೋಗಿ ಯುವಜನತೆಗೆ ಉದ್ಯೋಗ ಕಲ್ಪಿಸಲು ಭಗತ್ ಸಿಂಗ್ ನ್ಯಾಷನಲ್ ಎಂಪ್ಲಾಯ್ ಮೆಂಟ್ ಕಾಯ್ದೆ ಜಾರಿಗೆ ತರಬೇಕು’ ಎಂದು ಒತ್ತಾಯಿಸಿದರು.
ಕೋಟ್ಯಂತರ ಜನರು ಉದ್ಯೋಗವನ್ನು ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದು ದೂರಿದರು.
ಡೀಸೆಲ್, ಪೆಟ್ರೋಲ್ ಬೆಲೆ ಹೆಚ್ಚಳದಿಂದಾಗಿ ಅಡುಗೆ ಎಣ್ಣೆ, ಅಡುಗೆ ಅನಿಲದ ಬೆಲೆಗಳು ಗಗನಕ್ಕೇರಿವೆ. ಕೂಲಿ ಕಾರ್ಮಿಕರಿಗೂ ಕೆಲಸವಿಲ್ಲದೇ ಜೀವನ ನಡೆಸುವುದು ಕಷ್ಟಕರವಾಗಿದೆ. ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದಾಗಿ ದೇಶದ ಜನರು ಕಂಗಾಲಾಗಿದ್ದಾರೆ. ನಿರುದ್ಯೋಗ ಸಮಸ್ಯೆ ನಿರ್ವಹಣೆಗಾಗಿ, ಉದ್ಯೋಗ ಭದ್ರತಾ ಕಾಯ್ದೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ತಾಲ್ಲೂಕು ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್, ಮುಜೀಬ್ ಉರ್ ರೆಹಮಾನ್, ರಾಜ್ಯ ಕಾರ್ಯದರ್ಶಿ ರಮೇಶ್ ನಾಯ್ಕ, ರಾಜ್ಯ ಉಪಾಧ್ಯಕ್ಷ ಬಳಿಗನೂರು ಕೊಟ್ರೇಶ್, ಚಂದ್ರನಾಯ್ಕ, ದೊಡ್ಡ ಬಸವರಾಜ್, ದ್ವಾರಕೀಶ್, ಎಂ. ಬಸವರಾಜ್, ವೀರಯ್ಯ ಇದ್ದರು.